ಕರಾವಳಿ ಬದುಕು, ಬವಣೆ, ಅವರ ಸುಖ–ದುಃಖ, ಅವರ ವಿಚಾರಗಳ ಬಗ್ಗೆ ಹೇಳುವ ಸಿನಿಮಾವೊಂದು ತೆರೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗುತ್ತಿದೆ. ಈ ಸಿನಿಮಾ ನಿರ್ದೇಶಿಸಿರುವವರು ದೇವರಾಜ್ ಪೂಜಾರಿ. ಸಿನಿಮಾ ಚಿತ್ರೀಕರಣ ನಡೆದಿರುವುದು ಉಡುಪಿ, ಕುಂದಾಪುರದ ಕಡಲ ತೀರದ ಪ್ರದೇಶಗಳಲ್ಲಿ. ‘ಕಡಲ ತೀರದ ಕಹಾನಿ’ ಎಂಬ ಅಡಿಶೀರ್ಷಿಕೆಯನ್ನು ಈ ಸಿನಿಮಾಕ್ಕೆ ನೀಡಲಾಗಿದೆ.
ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಮಾಧ್ಯಮ ಪ್ರತಿನಿಧಿಗಳನ್ನು ಕರೆದಿತ್ತು. ಸಿನಿಮಾದ ಲಿರಿಕಲ್ ವಿಡಿಯೋವನ್ನು ಮಾಧ್ಯಮದವರಿಗೆ ತೋರಿಸಿದರು.
‘ಕರಾವಳಿ ಜನರ ಬದುಕು, ಬವಣೆ, ಅಲ್ಲಿನ ಜನರಲ್ಲಿನ ವಿಚಾರಗಳು ಏನಿವೆ ಎಂಬುದನ್ನು ಹೇಳುವ ಪ್ರಯತ್ನ ನಮ್ಮ ಸಿನಿಮಾದಲ್ಲಿ ಆಗಿದೆ’ ಎಂದರು ದೇವರಾಜ್ ಪೂಜಾರಿ. ಕರಾವಳಿ ಎಂದಾಕ್ಷಣ ಹಲವರ ಮನಸ್ಸಿನಲ್ಲಿ ಕೇರಳದ ಚಿತ್ರಣ ಮೂಡುತ್ತದೆ ಎಂಬುದನ್ನು ಸುಳ್ಳುಮಾಡಲು ‘ಕಿನಾರೆ’ ಸಿನಿಮಾ ತೆರೆಗೆ ಬರುತ್ತಿದೆ ಎಂದರು. ಅಲ್ಲದೆ, ಮನಸ್ಸನ್ನು ತಟ್ಟುವಂತಹ ಮುಗ್ದ ಪ್ರೇಮಕಥೆ ಇದರಲ್ಲಿ ಇದೆ ಎಂದೂ ದೇವರಾಜ್ ಹೇಳಿಕೊಂಡರು.
ಸತೀಶ್ ರಾಜ್, ಸಿಹಿಕಹಿ ಚಂದ್ರು, ದತ್ತಣ್ಣ, ಅಪೂರ್ವ ಪುರೋಹಿತ್, ಅರುಣ ಬಾಲರಾಜ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
‘ಮೀರಾ ಎನ್ನುವ ಪಾತ್ರದಲ್ಲಿ ನಾನು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರದ ವಿವರಗಳನ್ನು ಹೆಚ್ಚೆಚ್ಚು ಹೇಳಿದರೆ ಕಥಾತಿರುಳು ಬಿಟ್ಟುಕೊಟ್ಟಂತೆ ಆಗುತ್ತದೆ’ ಎಂದು ಜಾಣತನದಿಂದ ಮಾತನಾಡಿದರು ನಾಯಕಿ ಗೌತಮಿ ಜಾಧವ್.
ಕಡಲ ತೀರದ ಪ್ರತಿಭೆಗಳು ಕನ್ನಡ ಸಿನಿಮಾ ರಂಗ ಪ್ರವೇಶಿಸುತ್ತಿರುವುದು ಉತ್ತಮ ಬೆಳವಣಿಗೆ. ಕರಾವಳಿಯ ಸೊಗಸು, ಬದುಕನ್ನು ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಪ್ರೀತಿಯ ತೇವ ಹಾಗೂ ಸಂಕಟಗಳನ್ನು ಕಥಾರೂಪದಲ್ಲಿ ಚೆನ್ನಾಗಿ ಹೆಣೆದಿದ್ದಾರೆ ಈ ಯುವಕರು’ ಎಂದರು ಗೀತ ರಚನೆಕಾರ ಡಾ. ನಾಗೇಂದ್ರ ಪ್ರಸಾದ್. ಈ ಸಿನಿಮಾ ಡಿಸೆಂಬರ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.