ADVERTISEMENT

ಕಣ್ಣು, ಕಿವಿ ಹುಷಾರ್!

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದು ಸಹಜ. ಆದರೆ ಸುಡುಮದ್ದು ಹಾಗೂ ರಾಕೆಟ್ ಹೊಡೆಯುವಾಗ ಸೂಕ್ತ ಮುಂಜಾಗ್ರತೆ ವಹಿಸಬೇಕು. ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ಇಡಬೇಕು.
 
ಕಣ್ಣಿಗೆ ಅಪಾಯವಾಗದಂತೆ ಜಾಗರೂಕತೆ ಮುಖ್ಯ ಎನ್ನುತ್ತಾರೆ ಕೋರಮಂಗಲ ಮತ್ತು ಎಚ್‌ಎಸ್ ಆರ್ ಬಡಾವಣೆ ದೇವಿ ಕಣ್ಣಿನ ಆಸ್ಪತ್ರೆ ಸಂಸ್ಥಾಪಕ ಅಧ್ಯಕ್ಷ ಡಾ. ಬಾಲಕೃಷ್ಣ ಶೆಟ್ಟಿ.

ದೃಷ್ಟಿ ರಕ್ಷಣೆಗೆ ಅವರ ಸಲಹೆಗಳು
* ಸುಡುಮದ್ದುಗಳನ್ನು ತೆರೆದ ಪ್ರದೇಶದಲ್ಲಿ ಮಾತ್ರ ಸುಡಿ.

* ಸಿಡಿಯುವುದನ್ನು ಆನಂದಿಸುವಾಗ ಸುರಕ್ಷಿತ ದೂರದಲ್ಲಿರಿ.

* ಸುರಕ್ಷತೆಗೆ ಉದ್ದವಿರುವ ಸುಡುಬತ್ತಿ ಬಳಸಿ.

* ರಕ್ಷಣಾತ್ಮಕ ಕನ್ನಡಕ ಧರಿಸಿ.

* ಹತ್ತಿ ಬಟ್ಟೆ ಧರಿಸಿ. ಸಿಂಥೆಟಿಕ್ ಹಾಗೂ ರೇಷ್ಮೆ ಬಟ್ಟೆ ಬೇಡ.

* ಸುಲಭವಾಗಿ ಸುಡಬಲ್ಲ ಸರಕುಗಳಿರುವಲ್ಲಿ ರಾಕೆಟ್ ಬಳಸಬೇಡಿ.

* ಮಕ್ಕಳತ್ತ ತೀವ್ರ ನಿಗಾ ಇರಲಿ. ಏಕೆಂದರೆ ಅವರೇ ಗೊತ್ತಿಲ್ಲದೆ ಹೆಚ್ಚು ಅಪಾಯಕ್ಕೆ ಒಳಗಾಗುವವರು.

* ರಾತ್ರಿ 10 ರಿಂದ ಬೆಳಿಗ್ಗೆ 6ರ ವರೆಗೆ ಪಟಾಕಿ ಸುಡಬೇಡಿ.

* ಅಕಸ್ಮಾತ್ ಪಟಾಕಿ ಕಿಡಿ ಬಿದ್ದರೆ ಸ್ವಚ್ಛ ನೀರಿನಲ್ಲಿ ಕಣ್ಣನ್ನು ತೊಳೆಯಿರಿ. ತಕ್ಷಣ ಹತ್ತಿರದ ವೈದ್ಯರ ಬಳಿ ಹೋಗಿ. ಸ್ವಯಂ ಚಿಕಿತ್ಸೆಯ ಸಾಹಸ ಮಾಡಬೇಡಿ.

* ಪಟಾಕಿಗೆ ಬದಲಾಗಿ ದೀಪಗಳ ಅಲಂಕಾರ ಮಾಡಿ.

* ತುರ್ತು ಸಂದರ್ಭದಲ್ಲಿ 98805 70094 , 2563 0563 ಸಂಪರ್ಕಿಸಿ.

ಕಿವಿ ಕಾಳಜಿ
ಪಟಾಕಿ ಸಿಡಿಸುವಾಗ ಭಾರಿ ಶಬ್ದ ಬರುತ್ತದೆ. ಸೂಕ್ತ ಮುನ್ನೆಚ್ಚರಿಕೆ ವಹಿಸದೇ ಹೋದರೆ ಇದು ನಿಮ್ಮ ಕಿವಿಗೆ ಅಪಾಯ ಉಂಟು ಮಾಡಬಲ್ಲದು. ಅಲ್ಲದೆ ಕಿವುಡುತನ, ಶ್ರವಣ ಸಾಮರ್ಥ್ಯ ನಷ್ಟ, ಅತಿ ರಕ್ತದೊತ್ತಡ, ಹೃದಯಾಘಾತ, ನಿದ್ರಾಭಂಗಕ್ಕೆ ಕಾರಣವಾದೀತು ಎಂದು ಎಚ್ಚರಿಸುತ್ತಾರೆ ಶ್ರವಣ ತಜ್ಞ ಮತ್ತು ರಾಜನ್ ವಾಕ್ ಶ್ರವಣ ಕೇಂದ್ರದ ನಿರ್ದೇಶಕ ಡಾ. ಜಿ. ಕೃಷ್ಣಕುಮಾರ್. ಅವರು ನೀಡುವ ಸಲಹೆಯೆಂದರೆ-

* ಪಟಾಕಿ ಸಿಡಿಸುವಾಗ ಕಿವಿ ರಕ್ಷಣೆಗೆ ಇಯರ್ ಪ್ಲಗ್ ಧರಿಸಬೇಕು. ಇದರಿಂದ ಶಬ್ದ 15 ರಿಂದ 30 ಡೆಸಿಬಲ್ಸ್‌ನಷ್ಟು ಕಡಿಮೆಯಾಗುತ್ತದೆ. ಕಿವಿಗೆ ಹತ್ತಿ ಹಾಕಿಕೊಳ್ಳುವುದರಿಂದ ಪ್ರಯೋಜನವಿಲ್ಲ.

* ಕಿವಿ ಸಮಸ್ಯೆ ಕಂಡುಬಂದರೆ ಡ್ರಾಪ್ ಹಾಕುವುದು, ಸ್ವಚ್ಛಗೊಳಿಸುವುದು ಮಾಡಬೇಡಿ. ತಜ್ಞ ವೈದ್ಯರನ್ನು ಸಂಪರ್ಕಿಸಿ.

* ಭಾರಿ ಶಬ್ದ ಮಾಡುವ ಪಟಾಕಿ ಹಚ್ಚಲು ಮಕ್ಕಳನ್ನು ಪ್ರೋತ್ಸಾಹಿಸಬೇಡಿ. ಅತಿ ಶಬ್ದದಿಂದ ಅವರನ್ನು ದೂರವಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.