ADVERTISEMENT

ಕಣ್ಮನ ಸೆಳೆವ ಬುದ್ಧ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಸ್ವಯಂ-ಪರಿಪೂರ್ಣತೆ ಹಾಗೂ ಜ್ಞಾನದ ಪ್ರತೀಕ ಬುದ್ಧ. ಈತ ಇವೆರಡು ಭಾವಗಳ ಸಾರ್ವತ್ರಿಕ ಸಂಕೇತ ಕೂಡ ಹೌದು. ಬುದ್ಧನ ಮುಖದಲ್ಲಿರುವ ದಿವ್ಯ ತೇಜಸ್ಸು ಅಂತಹುದು.
ಬುದ್ಧ ಇರುವ ಸ್ಥಳದಲ್ಲೆಲ್ಲಾ ಶಾಂತಿ, ನೆಮ್ಮದಿ ಎಂಬ ಸುವಾಸನೆ ಪಸರಿಸಿಕೊಂಡಿರುತ್ತದೆ. ಪ್ರಶಾಂತತೆ ಮನೆಮಾಡಿಕೊಂಡಿರುತ್ತದೆ. ಈ ಎಲ್ಲ ಕಾರಣಗಳಿಂದ ಬುದ್ಧ ನಮ್ಮ ನಡುವೆ ಪ್ರಾಮುಖ್ಯ ಪಡೆದುಕೊಂಡಿದ್ದಾನೆ. ಇದೇ ಕಾರಣಕ್ಕಾಗಿ ಮನೆಗಳಲ್ಲಿ, ಹೋಟೆಲ್‌ಗಳಲ್ಲಿ ಹಾಗೂ ಮತ್ತಿತರೆ ಸ್ಥಳಗಳಲ್ಲಿ ಬುದ್ಧನ ವಿಗ್ರಹಗಳು ರಾರಾಜಿಸುತ್ತಿವೆ.

ಎಕಾ ಗ್ಯಾಲರಿ ಆಯೋಜಿಸಿರುವ `ಸೆಲೆಬ್ರೆಟಿಂಗ್ ಬುದ್ಧ~ ಎಂಬ ಬುದ್ಧ ನಮನದಲ್ಲಿ ಪ್ರದರ್ಶನಗೊಂಡಿರುವ ಬುದ್ಧನ ಪ್ರತಿಮೆಗಳು ಮನ ಸೆಳೆಯುತ್ತವೆ. ಇಲ್ಲಿರುವ ನಾನಾ ಬಗೆಯ ಮನಮೋಹಕ ಬುದ್ಧನ ವಿಗ್ರಹಗಳು ಕಣ್ಮನ ಸೆಳೆಯುತ್ತವೆ.

ಬುದ್ಧನ ವಿಗ್ರಹ, ಸಣ್ಣ ಪುತ್ಥಳಿಗಳು, ತಲೆ, ಭುಜ ಹಾಗೂ ಎದೆ ಮಾತ್ರವೇ ಇರುವಂತಹ ಆಕರ್ಷಕ ಪ್ರತಿಮೆಗಳು ಇಲ್ಲಿ ನಳನಳಿಸುತ್ತಿವೆ. ಮರದಲ್ಲಿ ಕೆತ್ತಿದ ಆಕರ್ಷಕ ವಿಗ್ರಹಗಳು ಇಲ್ಲಿ ನಗುತ್ತಿವೆ. ಕುಂಚ ಹಾಗೂ ಡಿಜಿಟಲ್‌ಪ್ರಿಂಟ್‌ನಲ್ಲಿ ಮೈದಳೆದ ಬುದ್ಧನ ಗಾಂಭೀರ್ಯ  ಮನಸೆಳೆಯುತ್ತದೆ.
 
ಇವಲ್ಲದೇ ಮೆಟಲ್, ವುಡ್, ಟೆರ‌್ರಾಕೊಟ್ಟಾ, ಕ್ಯಾನ್ವಾಸ್‌ನಲ್ಲಿ ರೂಪುಗೊಂಡ ಬುದ್ಧನ ನಾನಾ ಅವತಾರಗಳು ಕಣ್ಮನ ಸೆಳೆಯುತ್ತವೆ. 2 ಇಂಚಿನಿಂದ ಹಿಡಿದು 50 ಇಂಚಿನ ಪ್ರತಿಮೆಗಳು ಇಲ್ಲಿ ಲಭ್ಯವಿದೆ. ಬುದ್ಧನ ಈ ಭಾವಚಿತ್ರಗಳು ಸಾಂಪ್ರದಾಯಿಕತೆ, ಸಮಕಾಲೀನತೆ ಹಾಗೂ ಮಾಡ್ರರ್ನ್ ಆರ್ಟ್ ಅನ್ನು ಪ್ರತಿನಿಧಿಸುತ್ತಿವೆ.

`ಈ ವರ್ಷ ಇಲ್ಲಿ ಹಲವಾರು ಅಪರೂಪದ ಬುದ್ಧನ ವಿಗ್ರಹಗಳು ಪ್ರದರ್ಶನಗೊಂಡಿವೆ. ದೇಶದ ಎಲ್ಲ ಕಲಾವಿದರು ತಯಾರಿಸಿದ ನಯನ ಮನೋಹರವಾದ ಬುದ್ಧನ ಪ್ರತಿಮೆಗಳು ಮನ ಕದಿಯುತ್ತವೆ. ಸೆಲೆಬ್ರೆಟಿಂಗ್ ಬುದ್ಧ ಕಾರ್ಯಕ್ರಮ ಜ.29ರ ವರೆಗೆ ನಡೆಯಲಿದೆ~ ಎನ್ನುತ್ತಾರೆ ಎಕಾ ನಿರ್ದೆಶಕ ಕಿಮಿಕೊ ಮೆನ್‌ಜಿಸ್.
 
ಸ್ಥಳ: ಎಕಾ, 19 ಗಂಗಾಧರ್‌ಚೆಟ್ಟಿ ರಸ್ತೆ, ಆರ್‌ಬಿಎಎನ್‌ಎಂಎಸ್ ಗ್ರೌಂಡ್ ಎದುರು, ಹಲಸೂರು ಲೇಕ್ ಹತ್ತಿರ. ಬೆಳಿಗ್ಗೆ 10ರಿಂದ ರಾತ್ರಿ 8. ಮಾಹಿತಿಗೆ: 98454 77648.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.