ADVERTISEMENT

ಕುಂಚ ಕೌಶಲದ ಪ್ರದರ್ಶನ

ಸುಬ್ರಹ್ಮಣ್ಯ ಎಚ್.ಎಂ
Published 16 ಜೂನ್ 2017, 19:30 IST
Last Updated 16 ಜೂನ್ 2017, 19:30 IST
ಶ್ರೀಮತಿ ರಚಿಸಿರುವ ಮೈಸೂರು ಶೈಲಿಯ ವರ್ಣಚಿತ್ರ
ಶ್ರೀಮತಿ ರಚಿಸಿರುವ ಮೈಸೂರು ಶೈಲಿಯ ವರ್ಣಚಿತ್ರ   

ಚಿತ್ರಕಲಾ ಪರಿಷತ್‌ನಲ್ಲಿ ಮಾತಿಗೆ ಸಿಕ್ಕ ಚಿತ್ರಕಲಾವಿದರು ತಮ್ಮ ಕಲಾಯಾತ್ರೆ ನೆನಪುಗಳನ್ನು ಮೆಲುಕು ಹಾಕಿದರು. ಅವರೆಲ್ಲಾ ಒಟ್ಟುಗೂಡಲು ಒಂದು ಕಾರಣವಿತ್ತು; ಪ್ರೀತಿಯಿಂದ ರಚಿಸಿದ ಕಲಾಕೃತಿಗಳ ಪ್ರದರ್ಶನಕ್ಕಾಗಿ ಸಿದ್ಧತೆಯಲ್ಲಿ ತೊಡಗಿದ್ದರು.

ಅವರು ಸಾಂಪ್ರದಾಯಿಕವಾಗಿ ಯಾವುದೇ ಕೋರ್ಸ್ ಕಲಿತರವಲ್ಲ.  ಶಾಲಾ ಶಿಕ್ಷಕರು, ಗೃಹಿಣಿಯರು, ಸಾಫ್ಟ್‌ವೇರ್ ಕಂಪೆನಿಯ ಕಂಪೆನಿ ಉದ್ಯೋಗಿಗಳು, ಸಂಗೀತ, ರಂಗಭೂಮಿಯಲ್ಲಿ ತೊಡಗಿಸಿಕೊಂಡವರು. ಅವರೆಲ್ಲಾ ಒಟ್ಟಾಗಿ ಈಗ ಚಿತ್ರಕಲಾ ಪರಿಷತ್ತಿನಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದ್ದಾರೆ.

ತರ್ಮುಖಿಗಳಿಗೆ ಚಿತ್ರಕಲೆ ಉತ್ತಮ ಹವ್ಯಾಸವಾಗಬಲ್ಲದು ಎಂದು ಪೂರ್ಣಪ್ರಜ್ಞಾ ಶಾಲೆಯ ಶಿಕ್ಷಕಿ ವಿನೋದಿನಿ ಸುರೇಶ್ ಹೇಳುತ್ತಾರೆ. ಅವರು ರಚಿಸಿರುವ ಪ್ರಕೃತಿಯ ಬಿಡಿ ಚಿತ್ರಗಳು ಮಾತಿನ ಬಿಂಬದಂತಿದ್ದವು.

ADVERTISEMENT

(ಸುನೀತಾ ಕೃಷ್ಣ ರಚನೆಯ ಲಂಬಾಣಿ ಕಲಾಕೃತಿ)

ಪ್ರದರ್ಶನದಲ್ಲಿ ಪಾಲ್ಗೊಂಡಿರುವ ಸಹಕಲಾವಿದರ ಉಮೇದನ್ನು ಗಮನಿಸುತ್ತಿದ್ದ 66ರ ಹರ್ಷದ್‌ ಅವರ ಪ್ರಕಾರ ವೃತ್ತಿ ಜೊತೆ ಜೊತೆಗೆ ಹವ್ಯಾಸ ಸರಿದೂಗಿಸಿಕೊಂಡು ಹೋಗುವುದು ಕೊಂಚ ಪ್ರಯಾಸದ ಕೆಲಸವೇ.

‘ಹವ್ಯಾಸದ ಗೀಳಿನಿಂದ ವೃತ್ತಿಯಲ್ಲಿ ಏರುಪೇರಾಗಿ ಕೆಲವರು ಹವ್ಯಾಸವನ್ನೇ ಪ್ರವೃತ್ತಿಯಾಗಿ ರೂಢಿಸಿಕೊಳ್ಳುವುದುಂಟು. ಇನ್ನೂ ಕೆಲವರು ಎರಡನ್ನೂ ಸರಿದೂಗಿಸಿಕೊಂಡು ಸೈ ಎನಿಸಿಕೊಳ್ಳುತ್ತಾರೆ. ಆದರೆ, ನನ್ನ ವೃತ್ತಿ ಕೊಂಚ ವಿಭಿನ್ನ; ನಾನು ಕುದುರೆ ತರಬೇತುದಾರ. 40 ವರ್ಷಗಳಿಂದ ರೇಸ್‌ಕೋರ್ಸ್‌ನಲ್ಲಿ ಓಡುವ ಕುದುರೆಗಳಿಗೆ ತರಬೇತಿ,  ಲಗಾಮು ಹಾಕುವುದನ್ನು ಕಲಿಸುತ್ತಿದ್ದೇನೆ. ವೃತ್ತಿಯ ಏಕಾತನತೆ, ಒತ್ತಡದಿಂದ ಹೊರಬರಬೇಕು ಎಂದು ಚಿತ್ರಕಲೆಯಲ್ಲಿ ತೊಡಗಿಸಿಕೊಂಡೆ’ ಎಂದು ಹೇಳುತ್ತಾರೆ.

ಕೈಲಾಸ ಪರ್ವತದ ಕಲಾಕೃತಿ ಅವರ  ಏಕಾಗ್ರತೆಗೆ ಸಾಕ್ಷಿಯಂತಿತ್ತು. ಕಲಾವಿದ ಅಶೋಕ್ ಕುಮಾರ್ ಅವರು ಚಿತ್ರಕಲೆಯಲ್ಲಿ ಆಸಕ್ತಿ ಇರುವವರಿಗೆ ತಮ್ಮ ‘ಎಕೆಆರ್ ಸ್ಕೂಲ್ ಆಫ್ ಆರ್ಟ್ಸ್’ ವತಿಯಿಂದ ಕಲಾವಿದರು ವಾಸವಾಗಿರೊ ಬಡಾವಣೆಗೇ ಹೋಗಿ ಚಿತ್ರಕಲೆಯನ್ನು ಕಲಿಸುತ್ತಾರೆ. ಅಲ್ಲಿಯೇ ಕೊಠಡಿ ಬಾಡಿಗೆಗೆ ಪಡೆದು ತರಬೇತಿ ನೀಡುತ್ತಾರೆ.

(ಸಾರಿಕಾ ಗೋಡ್ಕಂಡಿ ಬಿಡಿಸಿರುವ ಗಣೇಶನ ಸೊಂಡಿಲು)

‘ಎಲ್ಲರಿಗೂ ಅನುಕೂಲವಾಗುವ ಸಮಯದಲ್ಲಿ ತರಬೇತಿ ನೀಡಬೇಕಾದ ಕಾರಣ ನಿಯಮಿತ ಸಮಯ ಎಂಬುದು ಇರುವುದಿಲ್ಲ. 16 ವರ್ಷದಿಂದಲೂ ಬಡಾವಣೆಗಳಲ್ಲಿ ತರಬೇತಿ ನೀಡುತ್ತಿದ್ದೇನೆ. ಕೆಲವರು ಸ್ವತಂತ್ರ ಪ್ರದರ್ಶನ ಕೂಡ ಏರ್ಪಡಿಸುವಷ್ಟು ಪರಿಣತಿ ಸಾಧಿಸಿದ್ದಾರೆ’ ಎಂದು ಹೆಮ್ಮೆಯಿಂದ ಅವರು ಹೇಳುತ್ತಾರೆ.

**

ಕಲಾವಿದರು: ಶ್ವೇತಾ ರಂಗನಾಥ್, ಸುನೀತಾ ಕೃಷ್ಣ, ವಿನೋದಿನಿ ಸುರೇಶ್, ಮೀರಾ ಜ್ಞಾನಚಂದ್, ಸಾರಿಕಾ ಗೋಡ್ಕಂಡಿ, ಸೀಮಾ, ಶ್ರೀಮತಿ, ಗೀತಾಂಜಲಿ, ಕೀರ್ತಿ ವಿಕಾಸ್, ಶಾಲಿನಿ ಸಿಂಗ್, ಆರತಿ ಪಟ್ನಾನಾಗ್, ಸೀಮಾ ಮೋಹನ್, ರಾಜೇಶ್ವರಿ ಅವೀಷ್, ನಾಗಾದಿವ್ಯ, ಪ್ರಿಯಾಜಾ
ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ
ಸಮಯ: ಬೆಳಿಗ್ಗೆ10.30 ರಿಂದ ಸಂಜೆ 5.30
ಕೊನೆ ದಿನಾಂಕ: ಜೂನ್ 18
ಪ್ರವೇಶ: ಉಚಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.