ADVERTISEMENT

ಕೆರೆ ರಕ್ಷಣೆಗೆ ಕೈಗಾರಿಕೆಗಳ ಪಣ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 19:30 IST
Last Updated 8 ಜೂನ್ 2011, 19:30 IST

ಭಾರತೀಯ ಕೈಗಾರಿಕಾ ಮಹಾಸಂಘದ (ಸಿಐಐ) ಕರ್ನಾಟಕ ಶಾಖೆ ತನ್ನ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆ (ಸಿಎಸ್‌ಆರ್) ಅಂಗವಾಗಿ  ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಸಹಭಾಗಿತ್ವದಲ್ಲಿ (ಐಜಿಬಿಸಿ) `ಬನ್ನಿ ಭವಿಷ್ಯಕ್ಕಾಗಿ ಕೆರೆಗಳನ್ನು ರಕ್ಷಿಸೋಣ~ ಎಂಬ ಸಂದೇಶದೊಂದಿಗೆ ಬೆಳ್ಳಂದೂರು ಕೆರೆ ವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿತ್ತು,
ಇದರಲ್ಲಿ ವೋಲ್ವೊ, ಟೈಕೊ ಎಲೆಕ್ಟ್ರಾನಿಕ್ಸ್, ಥಾಮ್ಸನ್ ರಾಯಿಟರ್ಸ್, ಕೆನ್ನಮೆಟಲ್, ಟಾಟಾ ಬಿಪಿ ಸೋಲಾರ್, ಟೆಗುಟೆಕ್, ಓಟಿಸ್ ಸೇರಿದಂತೆ ಸಿಐಐ ಮತ್ತು ಐಜಿಬಿಸಿಯ ಸದಸ್ಯ ಸಂಸ್ಥೆಗಳ ಸಿಬ್ಬಂದಿ, ಅವರ ಕುಟುಂಬ, ಸ್ಥಳೀಯ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.

ತಂಡದಲ್ಲಿದ್ದ 90ಕ್ಕೂ ಹೆಚ್ಚು ಮಕ್ಕಳು ಎಚ್‌ಎಎಲ್ ಮೈದಾನದಿಂದ ಬೆಳ್ಳಂದೂರು ಕೆರೆಯವರೆಗೆ ಕಾಲ್ನಡಿಗೆಯಲ್ಲೇ ಸಾಗಿದರು.

ಬೆಳ್ಳಂದೂರು ಕೆರೆಗೆ ಮರು ಜೀವ ನೀಡುವ ಉದ್ದೇಶದಿಂದ ಸಿಐಐ ವಿಶಿಷ್ಟ ಆಂದೋಲವೊಂದನ್ನು ರೂಪಿಸಿದೆ. `ಬೆಳ್ಳಂದೂರು ಕೆರೆಯ ಸುತ್ತ ನಡೆಯುತ್ತಿರುವ ಪರಿಸರ ಮಾಲಿನ್ಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದನ್ನು ತಡೆಯಲು ನಾವು ಎಲ್ಲ ಸಹಕಾರ ನೀಡುತ್ತಿದ್ದೇವೆ~ ಸಿಐಐ ಕರ್ನಾಟಕ ಘಟಕದ ಅಧ್ಯಕ್ಷ ಮತ್ತು ಭೊರುಕಾ ಪವರ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್. ಚಂದ್ರಶೇಖರ್ ಹೇಳಿದರು.

ಟೆಗುಟೆಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಎಲ್. ಕೃಷ್ಣನ್, ಎರಿನ್ ಕನ್ಸಲ್ಟೆಂಟ್ಸ್‌ನ ಎಂಡಿ ಸಾಯಿ ಪ್ರಕಾಶ್, ವೋಲ್ವೊ ಇಂಡಿಯಾ  ಎಂಡಿ ಎ.ಎಂ. ಮುರಳೀಧರನ್, ಬೆರ‌್ರಿಸ್ ಗ್ರೂಪ್‌ನ ಸಿಎಂಡಿ ಸಯಿದ್ ಬೆರ‌್ರಿ, ಕೆನ್ನಮೆಟಲ್‌ನ ಎಂಡಿ ಸಂತಾನೂ ಮೆಧಿ, ಥಾಮ್ಸನ್ ರಾಯಿಟರ್ಸ್ ಎಂಡಿ ಲಿನ್‌ಸೆ ಸಿಂಪ್ಸನ್ ಮತ್ತಿತರ ಗಣ್ಯರು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.