ADVERTISEMENT

ಗಮಕದ ರುಚಿ ಹತ್ತಿತು!.

ಉಷಾ ಕಟ್ಟೆಮನೆ
Published 14 ಮೇ 2018, 19:30 IST
Last Updated 14 ಮೇ 2018, 19:30 IST
ಕರ್ನಾಟಕ ಗಮಕ ಕಲಾ ಪರಿಷತ್ತು ನಗರದಲ್ಲಿ ಆಯೋಜಿಸಿದ್ದ ಗಮಕರೂಪಕ ಕಾರ್ಯಾಗಾರ
ಕರ್ನಾಟಕ ಗಮಕ ಕಲಾ ಪರಿಷತ್ತು ನಗರದಲ್ಲಿ ಆಯೋಜಿಸಿದ್ದ ಗಮಕರೂಪಕ ಕಾರ್ಯಾಗಾರ   

ಹೈಸ್ಕೂಲಿನಲ್ಲಿ ನಮಗೊಬ್ಬ ಕನ್ನಡ ಪಂಡಿತರಿದ್ದರು. ಅವರ ಹೆಸರು ಕೇಶವಭಟ್ಟ. ಪಠ್ಯದಲ್ಲಿದ್ದ ಕುಮಾರವ್ಯಾಸಭಾರತ, ಪಂಪಭಾರತ, ಹರಿಶ್ಚಂದ್ರ ಕಾವ್ಯ, ರನ್ನನ ಗದಾಯುದ್ಧ ಮುಂತಾದ ಹಳೆಗನ್ನಡ ಕಾವ್ಯಗಳನ್ನು ರಸವತ್ತಾಗಿ ಹಾಡುತ್ತಿದ್ದರು. ಹೈಸ್ಕೂಲ್ ತೊರೆದು ಮೂರು ದಶಕಗಳೇ ಕಳೆದು ಹೋಗಿವೆ. ಆದರೂ ಅವರಂದು ಹಾಡುತ್ತಿದ್ದ ಹಾಡುಗಳನ್ನು ನಾನಿಂದೂ ಆಗಾಗ ಗುನುಗುನಿಸುತ್ತಿದ್ದೇನೆ.

ಇದೇ ಮೇ ತಿಂಗಳ ಮೊದಲ ವಾರದಲ್ಲಿ ಗಮಕ ಪರಿಷತ್ತು ಹೊಸ ಪೀಳಿಗೆಗೆ ಗಮಕವನ್ನು ಪರಿಚಯಿಸುವ, ಜನಪ್ರಿಯಗೊಳಿಸುವ ಉದ್ದೇಶದಿಂದ ಹತ್ತು ದಿನಗಳ ಗಮಕ ಕಾರ್ಯಾಗಾರವನ್ನು ಆಯೋಜಿಸುತ್ತಿದೆ. ಆಸಕ್ತರು ಹೆಸರು ನೊಂದಾಯಿಸಿಕೊಳ್ಳಬಹುದು ಎಂಬ ಪ್ರಕಟಣೆಯನ್ನು ಪೇಪರಿನಲ್ಲಿ ನೋಡಿದೆ. ಬಾಲ್ಯದ ಆಸೆ ಗರಿಗೆದರಿತು. ಆದರೆ ಒಂದು ತೊಡಕ್ಕಿತ್ತು, ಅದರಲ್ಲಿ ಅವರು ಶಿಬಿರಾರ್ಥಿಗಳಿಗೆ ಸಂಗೀತದ ಪ್ರಾಥಮಿಕ ಜ್ಞಾನವಿರಬೇಕು ಎಂದು ಸೂಚಿಸಿದ್ದರು.

ನನಗೆ ಸಂಗೀತದ ಗಂಧಗಾಳಿಯೂ ಇರಲಿಲ್ಲ. ಕುಕ್ಕೆಸುಬ್ರಹ್ಮಣ್ಯದ ಸಮೀಪದ ಕುಗ್ರಾಮವೊಂದರಲ್ಲಿ ಹುಟ್ಟಿದವಳು. ಎಂಟೆಂಟು ಮೈಲು ಒಟ್ಟು ಹದಿನಾರು ಮೈಲು ನಡೆದು ಶಾಲೆಗೆ ಹೋಗಿದ್ದೇ ಹೆಚ್ಚು. ಇನ್ನು ಸಂಗೀತ ಕಲಿಯುವುದು ಕನಸಿನ ಮಾತಾಗಿತ್ತು. ಅದನ್ನೇ ಪರಿಷತ್ತಿನ ಕಾರ್ಯದರ್ಶಿಯಾದ ಶಾಂತಾ ನಾಗರಾಜ್ ಅವರಿಗೆ ತಿಳಿಸಿ ನನ್ನ ಮನದಾಸೆಯನ್ನು ತೋಡಿಕೊಂಡೆ. ಅವರು ಆಸಕ್ತಿ ಬಹುಮುಖ್ಯ ಎಂದು ಹೇಳಿ ಹೆಸರು ನೊಂದಾಯಿಸಿಕೊಂಡರು.

ADVERTISEMENT

ತುಂಬ ಸಡಗರದಿಂದ ಗಮಕ ಕಾರ್ಯಗಾರಕ್ಕೆ ಹೋದೆ. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಗಮಕಿಗಳಾ ಕಡಬ ಸುಬ್ರಹ್ಮಣ್ಯ, ಶ್ರೀಮತಿ ಜಯರಾಂ, ಜಿ. ನಾರಾಯಣ್ ರಂತ ಘಟಾನುಗಟಿಗಳಿದ್ದರು. ಜೊತೆಗೆ ಈಗಿನ ಗಮಕ ಪರಿಷತ್ತಿನ ಅಧ್ಯಕ್ಷರಾದ ಸ್ವತಃ ಗಮಕಿಗಳಾದ ಗಂಗಮ್ಮ ಕೇಶವಮೂರ್ತಿಯವರ ಸಹಯೋಗವೂ ಇತ್ತು.

ಗುರುಗಳು ನಮ್ಮ ಸಾಮರ್ಥ್ಯವನ್ನು ಅಂದಾಜುಮಾಡಿಕೊಂಡು ತುಂಬಾ ಸಹನೆ ಮತ್ತು ಪ್ರೀತಿಯಿಂದ ಕಾವ್ಯವನ್ನು ಹೇಗೆ ಓದಬೇಕು, ಅರ್ಥಕ್ಕೆ, ಸಂಗೀತದ ಲಯಕ್ಕೆ ಚ್ಯುತಿ ಬಾರದಂತೆ ಹೇಗೆ ಭಾವತುಂಬಿ ಹಾಡಬೇಕು ಎಂಬುದನ್ನು ಶ್ರಮಪಟ್ಟು ಮುತುವರ್ಜಿಯಿಂದ ಹೇಳಿಕೊಡುತ್ತಿದ್ದರು. ಬಿ.ಎಂ ಪ್ರತಿಷ್ಠಾನದಲ್ಲಿರುವ ಪರಿಷತ್ತಿನ ಆಪ್ತ ವಾತಾವರಣದಲ್ಲಿ , ಸಿಬ್ಬಂದಿ ವರ್ಗದರ್ ಆದರಾಥಿತ್ಯದಲ್ಲಿ ಹತ್ತು ದಿನಗಳು ಹೇಗೆ ಉರುಳಿದವೋ ಗೊತ್ತಿಲ್ಲ.

ನಮ್ಮನ್ನೆಲ್ಲಾ ಹೇಗೆ ತಿದ್ದಿತೀಡಿ ನಮ್ಮಿಂದಲೇ ಹರಿಶ್ಚಂದ್ರ ಕಾವ್ಯ ಮತ್ತು ಕುಮಾರವ್ಯಾಸ ಭಾರತದಿಂದ ಆಯ್ದ ಭಾಗಗಳ ಪ್ರದರ್ಶನವನ್ನು ಕೂಡಾ ಮಾಡಿಸಿದರು, ಅವರ ತರಬೇತಿ ಹೇಗಿತ್ತೆಂದರೆ ಎಲ್ಲರೂ ಎಲ್ಲಾ ಪಾತ್ರಗಳನ್ನು ಮಾಡಲು ಸಜ್ಜುಗೊಳಿಸಿದ್ದರು. ಸಮಾರೋಪದ ಎರಡು ದಿನಗಳ ಹಿಂದಿನವರೆಗೆ ನಾನು ಕೀಚಕನಾಗಿದ್ದೆ, ಹಿಂದಿನ ದಿನ ವಿಶ್ವಾಮಿತ್ರ ಪಾತ್ರಧಾರಿ ಗೈರು ಹಾಜರಿಯಾದ ಕಾರಣ ವಿಶ್ವಾಮಿತ್ರನಾದೆ. ಸಮರೋಪದಂದು ಹರಿಶ್ಚಂದ್ರನೇ ನಾಪತ್ತೆ! ಹಾಗಾಗಿ ಹರಿಶ್ಚಂದ್ರ ಮತ್ತು ವಿಶ್ವಾಮಿತ್ರ ಎರಡೂ ಪಾತ್ರಗಳನ್ನು ನಿರ್ವಹಿಸಬೇಕಾಯಿತು.

ಈಗ ನನ್ನಲ್ಲಿ ಗಮಕದ ರುಚಿ ಹತ್ತಿದೆ, ಸಂಗೀತ ಕಲಿಯುವ ಹುಚ್ಚು ಹಿಡಿದಿದೆ. ತಮ್ಮ ಇಳಿವಯಸ್ಸಿನಲ್ಲಿ ಸಂಗೀತ ಕಲಿಯಲು ಹೊರಟ ಶಿವರಾಮಕಾರಂತರೇ ನನಗೆ ಸ್ಪೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.