ADVERTISEMENT

ಜನರಲ್ಲಿ ಅತಿಯಾಸೆ, ಅಭದ್ರತೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST
ಜನರಲ್ಲಿ ಅತಿಯಾಸೆ, ಅಭದ್ರತೆ
ಜನರಲ್ಲಿ ಅತಿಯಾಸೆ, ಅಭದ್ರತೆ   

-ಏಮ್ ಫಾರ್ ಸೇವಾ ನಡೆದು ಬಂದ ದಾರಿ?
ಇಂದಿನ ವಸ್ತುನಿಷ್ಠ ಪ್ರಪಂಚದಲ್ಲಿ ಮನುಷ್ಯ ಸ್ವಾರ್ಥಿಯಾಗುವುದರೊಂದಿಗೆ ದುರಾಸೆ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಜನರಲ್ಲಿ ಅಭದ್ರತೆ (ಇನ್‌ಸೆಕ್ಯೂರಿಟಿ ಫೀಲಿಂಗ್), ಆತಂಕ ಜಾಸ್ತಿ ಆಗುತ್ತಿದೆ, ಇದೆಲ್ಲದರ ಮಧ್ಯೆ ‘ಇರುವವರು ಇಲ್ಲದವರ ನಡುವೆ ಬೆಸೆಯುವ ಕೊಂಡಿ’ಯಾಗಿ ’ಏಮ್ ಫಾರ್ ಸೇವಾ’ ಕೆಲಸ ಮಾಡುತ್ತಿದೆ. ಮುಖ್ಯವಾಗಿ ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳ ಕಲ್ಯಾಣಕ್ಕಾಗಿ ಈ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. ಇದೊಂದು ಆಂದೋಲನ ಅಥವಾ ಚಳವಳಿಯಂತೆ ಎಂದು ಹೇಳಬಹುದು.

-ಆದಿ ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಪ್ರತಿಪಾದಕರಾಗಿ, ಇಂದಿನ ಪೀಳಿಗೆಯೊಂದಿಗೆ ಬೆಸೆಯುವ ಕೊಂಡಿಯಾಗಿ ನೀವು ಗುರುತಿಸಿಕೊಂಡಿದ್ದೀರಿ. ಅದ್ವೈತವನ್ನು ಹೇಗೆ ಯುವ ಜನರಿಗೆ ತಲುಪಿಸುತ್ತಿದ್ದೀರಿ?
ಜೀವನದಲ್ಲಿ ಮನುಷ್ಯ ಏನೇ ಮಾಡಿದರೂ ಅವನನ್ನು ನಿಯಂತ್ರಿಸುವ ಶಕ್ತಿಯೊಂದು ಅದೃಶ್ಯವಾಗಿ ಇದ್ದೇ ಇದೆ. ಅದನ್ನು ಮರೆಯುವುದು ಅಥವಾ  ನಾವು ಕಡೆಗಣಿಸುವುದೋ ಅಸಾಧ್ಯ. ಶಂಕರಾಚಾರ್ಯರು ಪ್ರತಿಪಾದಿಸಿರುವ ಸಿದ್ಧಾಂತದ ಪ್ರಕಾರ ಆತ್ಮ ಮತ್ತು ಪರಮಾತ್ಮ ಇವೆರಡು ಬೇರೆ ಅಲ್ಲ. ಒಂದೇ ಎಂದು ಹೇಳುವುದು ಎಂದಿಗೂ ಪ್ರಸ್ತುತ.

-ಸ್ವಾಮೀಜಿಗಳು ಇಂದು ರಾಜಕೀಯ ವೇದಿಕೆಗಳಲ್ಲಿ ಕಾಣಿಸುತ್ತಿದ್ದಾರಲ್ಲ. ಧರ್ಮ- ರಾಜಕಾರಣ... ಏನನ್ನುವಿರಿ?
ಸ್ವಾಮೀಜಿಗಳು, ಧರ್ಮಗುರುಗಳು  ಯಾವುದೇ ಕಾರಣಕ್ಕೂ ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಬಾರದು. ಅವರು ದೂರ ನಿಂತು ಆಳುವ ದೊರೆಗಳಿಗೆ ಮಾರ್ಗದರ್ಶಕರಾಗಿಬೇಕು. ಹಿಂದೆ ಕೂಡ ರಾಜರಿಗೆ ಅವರ ಗುರುಗಳು ಅಂತ ಇರುತ್ತಿದ್ದರು; ಅವರು ರಾಜಗುರುಗಳಾಗಿ ನಿಲ್ಲಬೇಕೇ ವಿನಃ ಅವರೇ ಆಳುವವರು ಆಗಬಾರದು. ಅವರೇ ಆಳುವವರಾಗಿ, ಆಳುವವರು ಕೈಗೊಂಬೆಗಳಾದರೆ ಅದೊಂದು ದೊಡ್ಡ ದುರಂತವಾಗುತ್ತದೆ.

-ಭ್ರಷ್ಟಾಚಾರ, ರಾಜಕೀಯ ವಶೀಲಿ, ಸ್ವಜನ ಪಕ್ಷಪಾತ ಇದೇ ತುಂಬಿರುವ ಇಂದಿನ ಬದುಕಿನಲ್ಲಿ ನಿಜವಾದ ಸೇವೆಯನ್ನು ಗುರುತಿಸುವುದು, ಅಳವಡಿಸಿಕೊಳ್ಳುವುದು ಹೇಗೆ?
ಇಂದು ಎಲ್ಲೆಡೆ ಭ್ರಷ್ಟಾಚಾರ ಹೆಚ್ಚಿದೆ. ಜನರೂ ಎಚ್ಚೆತ್ತುಕೊಳ್ಳಬೇಕು. ಹಾಗಾಗಿ ಜನರು ತಮ್ಮ ಪ್ರತಿನಿಧಿಗಳನ್ನು ಎಚ್ಚರದಿಂದ ಆಯ್ಕೆ ಮಾಡಬೇಕು. ಆದರೆ ಹಲವಾರು ಬಾರಿ ನಾವು ಇದರಲ್ಲಿ ಸೋಲುತ್ತೇವೆ. ಆದರೂ ಇರುವುದರಲ್ಲಿಯೇ ಸರಿದೂಗಿಸಿ ಕೆಲಸವನ್ನು ಮಾಡಬೇಕು.

-ದೈನಂದಿನ ಬದುಕು, ವೃತ್ತಿ ಜೀವನದಲ್ಲಿ ನಾವು ಬಹಳಷ್ಟು ಒತ್ತಡ ಅನುಭವಿಸುತ್ತೇವೆ? ಇದನ್ನು ನಿವಾರಿಸಿ ಲವಲವಿಕೆಯಿಂದ ಇರುವುದು ಹೇಗೆ?
 ಮನಸ್ಸನ್ನು ಆದಷ್ಟೂ ಶಾಂತವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಧ್ಯಾನ ಉಪಯುಕ್ತ ವಿಧಾನ. ಮನಸ್ಸು ವಿಚಲಿತವಾಗುವುದಾದರೆ ಒಂದು ನಿಮಿಷ ದೀರ್ಘವಾದ ಉಸಿರು ತೆಗೆದುಕೊಂಡು ಬಿಡಿ. ದೇವರ ನಾಮಸ್ಮರಣೆ ಮಾಡಿ. ಮನಸ್ಸು ಹತೋಟಿಗೆ ಬರುತ್ತದೆ. ಇದೊಂದು ಸರಳ ವಿಧಾನ,ಅಷ್ಟೇ.

ADVERTISEMENT

-ಯುವಜನರಿಗೆ ನಿಮ್ಮ ಸಂದೇಶ?
ನಿಮ್ಮ ಗುರಿ, ಅಂತಿಮ ಲಕ್ಷ್ಯ ಏನು ಎಂಬುದನ್ನು ಗುರುತಿಸಿಕೊಂಡು ಸಾಧಿಸುವವರೆಗೂ ಪ್ರಯತ್ನಿಸಿ. ಸಣ್ಣಪುಟ್ಟ ಗೆಲುವಿನಲ್ಲೇ ಅಲ್ಪತೃಪ್ತರಾಗಿ ವಿರಮಿಸದಿರಿ. ನಿಮ್ಮ ಆತ್ಮವಿಶ್ವಾಸವನ್ನು ಹಗುರವಾಗಿ ಪರಿಗಣಿಸಬೇಡಿ, ಏಕೆಂದರೆ ಅದಕ್ಕೆ ಜಗತ್ತನ್ನೇ ಬದಲಿಸುವ ಸಾಮರ್ಥ್ಯ, ಶಕ್ತಿ ಇದೆ.

-ಬೆಂಗಳೂರಿನ ಬಗ್ಗೆ ಏನನ್ನಿಸುತ್ತದೆ?
ಮೊದಲು ತುಂಬಾ ಚೆನ್ನಾಗಿತ್ತು... ಆದರೆ ಇಂದು ಸಿಕ್ಕಾಬಟ್ಟೆ ಟ್ರಾಫಿಕ್ ಜಾಮ್, ಮಾಲಿನ್ಯ, ಜನದಟ್ಟಣೆ.                
                      

ಅದ್ವೈತ ವೇದಾಂತ ಪ್ರತಿಪಾದಕರಲ್ಲಿ ಸ್ವಾಮಿ ದಯಾನಂದ ಸರಸ್ವತಿ ಅವರದು ದೊಡ್ಡ ಹೆಸರು. ಅವರು ಮತ್ತು ಅವರ 150 ಶಿಷ್ಯರು ವೇದಾಂತ ಪರಂಪರೆಯನ್ನು ಹೊಸ ಪೀಳಿಗೆಯಲ್ಲಿ  ಬೆಳೆಸಿ ಉಳಿಸಲು ಕಂಕಣ ತೊಟ್ಟಿದ್ದಾರೆ.
ಅಮೆರಿಕ ಮತ್ತು ಭಾರತದ ಕೆಲವೆಡೆ ಸ್ವಾಮೀಜಿ ‘ಗುರುಕುಲ’ ನಡೆಸುತ್ತಿದ್ದಾರೆ. ಅವರು ಸ್ಥಾಪಿಸಿರುವ ‘ಏಮ್ ಫಾರ್ ಸೇವಾ’ ಸಂಸ್ಥೆ ಬುಡಕಟ್ಟು ಮಕ್ಕಳು, ಗ್ರಾಮೀಣ ಮತ್ತು ನಗರ ಪ್ರದೇಶದ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಧ್ಯೇಯ ಹೊಂದಿದೆ. ದೇಶಾದ್ಯಂತ 79 ಸ್ಥಳಗಳಲ್ಲಿ  ‘ಸೇವಾ’ದ ಉಚಿತ ವಿದ್ಯಾರ್ಥಿ ನಿಲಯಗಳಿವೆ. ಸಮಗ್ರ ಶಿಕ್ಷಣ ನೀಡುವ 17 ಸುಸಜ್ಜಿತ ಶಾಲೆಗಳಿವೆ. ಈ ಶಾಲೆಗಳಲ್ಲಿ ಹದಿನೈದು ಸಾವಿರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ದಿನಗಳ ಉಪನ್ಯಾಸ ನೀಡಲು ಇತ್ತೀಚೆಗೆ ಬಂದಿದ್ದ ಸ್ವಾಮೀಜಿ ‘ಮೆಟ್ರೊ’ಗೆ  ನೀಡಿದ ವಿಶೇಷ ಸಂದರ್ಶನದ ಸಾರಾಂಶ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.