ಪ್ರಾಣಿ ಜಗತ್ತಿಗೂ ಮಾನವನಿಗೂ ಅವಿನಾಭಾವ ಸಂಬಂಧ. ಆದಿ ಮಾನವ ಗುಹೆಗಳಲ್ಲಿ ಕೆತ್ತಿದ ಚಿತ್ರಗಳಲ್ಲೂ, ಬುಡಕಟ್ಟು ಜನರ ಕಲೆಯಲ್ಲೂ ಪ್ರಾಣಿಗಳ ಚಿತ್ರಗಳೇ ಹೆಚ್ಚಾಗಿ ಕಾಣುತ್ತವೆ. ಪ್ರಾಚೀನ ದೇವಾಲಯಗಳ ಶಿಲ್ಪ ಕಲಾಕೃತಿ, ಮನೆಯ ಬಾಗಿಲಿಗೆ ಮಾಡಿದ ಕಾಷ್ಠ ಕಲಾಕೃತಿಗಳಲ್ಲೂ ಪ್ರಾಣಿ, ಪಕ್ಷಿಗಳ ಕೆತ್ತನೆ ಇರುತ್ತವೆ.
ಪ್ರಾಣಿ, ಪಕ್ಷಿ, ಕೀಟಗಳ ದೈಹಿಕ ಬಲ, ಸೌಂದರ್ಯ ಮಾತ್ರ ಕಲಾವಿದನನ್ನು ಆಕರ್ಷಿಸುವುದಿಲ್ಲ. ಅವುಗಳ ಜೊತೆ ಒಂದು ರೀತಿಯ ಭಾವನಾತ್ಮಕ ಬಂಧ ಬೆಸೆದುಕೊಂಡಿರುತ್ತದೆ.
ಗಿರಿಧರ್ ಖಾಸನೀಸ್ ಅವರ ಕ್ರಿಮ್ಸ್ನ್ ಗ್ಯಾಲರಿ ಏರ್ಪಡಿಸಿರುವ ‘ಎ ಟ್ವಿಸ್ಟ್ ಇನ್ ದಿ ಟೇಲ್’ ಕಲಾ ಪ್ರದರ್ಶನದಲ್ಲಿ 12 ಯುವ ಕಲಾವಿದರು ಪ್ರಾಣಿಗಳ ಬಿಂಬವನ್ನು ಬಳಸಿಕೊಂಡು ನಗರ ಪ್ರದೇಶದಲ್ಲಿ ಮನುಷ್ಯ ಅನುಭವಿಸುವ ತಾಕಲಾಟ, ಆತನ ದ್ವಂದ್ವ ಮನಸ್ಥಿತಿ, ಸಂವೇದನೆಗಳನ್ನೆಲ್ಲ ಚಿತ್ರಿಸಿದ್ದಾರೆ. ಈ ಪ್ರದರ್ಶನದಲ್ಲಿ ಭಾಗಿಯಾಗಿರುವ ಬಹುತೇಕ ಕಲಾವಿದರು ಸಣ್ಣ ಪಟ್ಟಣ ಅಥವಾ ಹಳ್ಳಿಗಳಲ್ಲಿ ಬೆಳೆದವರು. ಅಲ್ಲಿಂದ ಮಹಾನಗರಕ್ಕೆ ಸ್ಥಳಾಂತರಗೊಂಡವರು. ಅವರ ಜೀವನಶೈಲಿ, ದೃಷ್ಟಿಕೋನದಲ್ಲಿ ವಿಶಿಷ್ಟ ಸಂವೇದನೆ ಬೆಳೆಸಿಕೊಳ್ಳಲು ಇದು ನೆರವಾಯಿತು.
ಆನಂದ್ ಕುಮಾರ್, ಗಣಪತಿ ಹೆಗ್ಡೆ, ಡಿ. ಮಧು, ಪ್ರವೀಣ್ ಕುಮಾರ್, ರಾಣಿ ರೇಖಾ, ಶ್ಯಾಮ್ ಭರತ್ ಯಾದವ್, ಶಿವಾನಂದ ಬಿ, ಸುನಿಲ್ ಲೋಹಾರ್, ಉರ್ಮಿಳಾ ವಿ.ಜಿ, ವರ್ಣಸಿಂಧು, ವೇಣುಗೋಪಾಲ್ ವಿ.ಜಿ. ಮತ್ತು ವಿಜಯ್ ಕುಮಾರ್ ಸಿ.ಎಸ್. ಪ್ರದರ್ಶನದಲ್ಲಿ ಪಾಲ್ಗೊಂಡ ಕಲಾವಿದರು.
ವೇಣುಗೋಪಾಲ್ ಕಲಾಕೃತಿಯಲ್ಲಿ ಮಾಯಾಮೃಗ ತೂಗಾಡುತ್ತಿರುವ ದೃಶ್ಯವಿದೆ. ಬೃಹತ್ ಆಕಾರದ ಕೈ, ಅದರ ಪಕ್ಕವೇ ಒಂಟಿಯಾಗಿ ಎತ್ತರದ ಕಟ್ಟಡದ ಗಾಜು ಸ್ವಚ್ಛಗೊಳಿಸುತ್ತಿರುವ ಕಾರ್ಮಿಕನ ಚಿತ್ರವಿದೆ. ಮಧು ಅವರ ಚಿತ್ರದಲ್ಲಿ ಬಣ್ಣ ಬದಲಿಸುವ ಗೋಸುಂಬೆ, ಉರುಳಿದ ಅಂಬೇಡ್ಕರ್ ಪ್ರತಿಮೆ ಸಾಗಿಸುತ್ತಿರುವ ದೃಶ್ಯ, ಕಾರಿನ ಹಿಂದೆ ಬಾಂಬ್ ಸಿಡಿದ ದೃಶ್ಯಗಳಿವೆ. ನಾಯಕರ ಆದರ್ಶವನ್ನು ಮೂಲೆಗುಂಪು ಮಾಡಿದ ಇಂದಿನ ರಾಜಕೀಯ ವ್ಯವಸ್ಥೆ, ಭಯೋತ್ಪಾದನೆಯ ಭೀತಿಯನ್ನು ಈ ಕಲಾಕೃತಿ ಬಿಂಬಿಸಿದೆ.
ಸ್ಥಳ: ಕ್ರಿಮ್ಸನ್ ಗ್ಯಾಲರಿ, ದಿ ಹ್ಯಾಟ್ವರ್ಕ್ಸ್ ಬುಲೇವಾರ್ಡ್, 32, ಕನ್ನಿಂಗ್ ಹ್ಯಾಮ್ ರಸ್ತೆ. ಪ್ರದರ್ಶನ ಏ. 30 ಕ್ಕೆ ಮುಕ್ತಾಯ. ಮಾಹಿತಿಗೆ: 94482 57518.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.