ADVERTISEMENT

ನಮ್ಮೊಡನೆ ಸಿದ್ಧಲಿಂಗಯ್ಯ...

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ಕನ್ನಡ ಜನಶಕ್ತಿ: ಗುರುವಾರ ನಮ್ಮೊಡನಿರುವ ಕನ್ನಡ ಕುಲದೀಪಕರ ಬದುಕು- ಮೆಲುಕು 5. ಮಾತು- ಸಂವಾದ- ಸನ್ಮಾನದಲ್ಲಿ ಈ ಬಾರಿಯ ಅತಿಥಿ, ಚಿತ್ರ ನಿರ್ದೇಶಕ ಸಿದ್ಧಲಿಂಗಯ್ಯ. ಕನ್ನಡ ಚಲನಚಿತ್ರ ರಂಗದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವ ನಿರ್ದೇಶಕರಲ್ಲಿ ಸಿದ್ಧಲಿಂಗಯ್ಯ ಒಬ್ಬರು. ಕನ್ನಡದಲ್ಲಿ 21 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

1936ರ ಡಿಸೆಂಬರ್ 15ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತರೂರು ಹಳ್ಳಿಯ ಕೃಷಿಕರ ಮನೆಯಲ್ಲಿ ಜನನ. ತಂದೆ ಲಿಂಗಣ್ಣ, ತಾಯಿ ಸಿದ್ಧಬಸಮ್ಮ. ರೈತ ಕುಟುಂಬದಿಂದ ಬಂದಿದ್ದರೂ ಬಾಲ್ಯದಿಂದಲೇ ಸಿನಿಮಾ ಗೀಳು. ನಟನಾಗಬೇಕು ಎಂಬ ಹೆಬ್ಬಯಕೆ. ಮಾಧ್ಯಮಿಕ ಶಿಕ್ಷಣ zಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ತೊಂದರೆ ಅಡ್ಡಿ ಬಂತು. ಆದರೂ ಕಲಾವಿದನಾಗಬೇಕೆಂಬ ಮನದಾಳದ ಬಯಕೆಯನ್ನು ಹತ್ತಿಕ್ಕಿಡಲಾಗದೆ 1953ರಲ್ಲಿ ಮೈಸೂರಿಗೆ ಬಂದರು.

ಅಂದು ರಾಜ್ಯದ ಏಕೈಕ ಸ್ಟುಡಿಯೋ ಆಗಿದ್ದ ‘ನವಜ್ಯೋತಿಯಲ್ಲಿ ಪ್ಲೋರ್ ಬಾಯ್ ಆಗಿ ಸೇರಿಕೊಂಡರು. ಅನಂತರ ಪ್ರೀಮಿಯರ್ ಸ್ಟುಡಿಯೋದಲ್ಲಿ ಲೈಟ್ ಬಾಯ್ ಆಗಿ ಬಡ್ತಿ ಪಡೆದರು. ಅಲ್ಲಿ ನಿರ್ಮಾಪಕ- ನಿರ್ದೇಶಕ ಶಂಕರ್ ಸಿಂಗ್ ಅವರಿಗೆ ಸಹಾಯಕರಾಗಿ ಹಂತ ಹಂತವಾಗಿ ಕೆಲಸ ಕಲಿಯಲು ಪ್ರಾರಂಭಿಸಿದರು.

1969ರಲ್ಲಿ ಸಿದ್ಧಲಿಂಗಯ್ಯನವರ ತಮ್ಮ ಜೀವನದ ಧ್ಯೇಯವನ್ನು ಸಾಧಿಸಲು ಅವಕಾಶ ಒದಗಿ ಬಂದಿತು. ದ್ವಾರಕೀಶ್ ನಿರ್ಮಾಪಕರಾಗಿ, ಡಾ.ರಾಜ್‌ಕುಮಾರ್ ಅವರು ನಾಯಕರಾಗಿ ನಟಿಸಿದ ಮೇಯರ್ ಮುತ್ತಣ್ಣ ಅವರ ನಿರ್ದೇಶನದ ಮೊದಲ ಚಿತ್ರ. ಅದು ಅವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತು.

ADVERTISEMENT

ಅವರ ನಿರ್ದೇಶನದಲ್ಲಿ ಹೊರಬಂದ, ಟಿ.ಕೆ.ರಾಮರಾಯರ ಕಾದಂಬರಿ ‘ಬಂಗಾರದ ಮನುಷ್ಯ’ ಎರಡು ವರ್ಷಕ್ಕೂ ಹೆಚ್ಚು ಬೆಂಗಳೂರಿನಲ್ಲಿ ಪ್ರದರ್ಶನಗೊಂಡು ಒಂದು ದಾಖಲೆ ಸ್ಥಾಪಿಸಿತು. ದಿ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಣ್ಣಕತೆ ಆಧಾರಿತ ‘ಭೂತಯ್ಯನ ಮಗ ಅಯ್ಯ’ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಗಳಿಸಿದ ಚಿತ್ರ. ಈ ಚಿತ್ರದ ಪ್ರವಾಹದ ದೃಶ್ಯಗಳು ಒಂದು ತಾಂತ್ರಿಕ ಪರಿಣತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ.
ಸಂಜೆ 5.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.