ADVERTISEMENT

ನಮ್ಮ ಬೆಂಗಳೂರು ನಾಳೆ ಸಮ್ಮಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 19:30 IST
Last Updated 7 ಫೆಬ್ರುವರಿ 2011, 19:30 IST

ಬೆಂಗಳೂರಿಗೆ ಮತ್ತೆ ಹಬ್ಬದ ವಾತಾವರಣ. ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ನೇತೃತ್ವದ ‘ನಮ್ಮ ಬೆಂಗಳೂರು’ ಪ್ರತಿಷ್ಠಾನ ಬುಧವಾರ  ನಗರದ ಬೆಳವಣಿಗೆ, ಬದುಕಿಗೆ ಅಸಾಮಾನ್ಯ ಕೊಡುಗೆ ನೀಡಿದ ಜೀವನದ ವಿವಿಧ ರಂಗಗಳ ಹತ್ತು ಶ್ರೀಸಾಮಾನ್ಯರು, ವೃತ್ತಿಪರರನ್ನು ಗುರುತಿಸಿ ಸನ್ಮಾನಿಸಲಿದೆ.

ತಮ್ಮ ಸುತ್ತಮುತ್ತ ಸದ್ದಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಎಲೆಮರೆಯ ಸಮಾಜಸೇವಕರನ್ನು ಸಾರ್ವಜನಿಕರು ಗುರುತಿಸಿ ಹೆಸರುಗಳನ್ನು ಸಲಹೆ ಮಾಡಿದ್ದರು. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರನ್ನು ಒಳಗೊಂಡ ಸಮಿತಿ ಈ ಹೆಸರುಗಳ ರಾಶಿಯಿಂದ ಹತ್ತು ಅಸಾಮಾನ್ಯರನ್ನು ಆಯ್ಕೆ ಮಾಡುತ್ತಿದೆ. ಇವರ ಹೆಸರುಗಳನ್ನು ಬುಧವಾರದ ಸಮಾರಂಭದಲ್ಲಿ ಪ್ರಕಟಿಸಿ ಸನ್ಮಾನಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಜನಪ್ರಿಯ ರಾಕ್ ಸಂಗೀತ ತಂಡ ಸ್ವರಾತ್ಮ , ಕನ್ನಡ ಚಿತ್ರರಂಗದ ಹಿನ್ನೆಲೆ ಸಂಗೀತ ನಿರ್ದೇಶಕ- ಗಾಯಕ ಗುರುಕಿರಣ್ ರಸಿಕರ ಮನತಣಿಸಲಿದ್ದಾರೆ. ಆ ಸಂಗೀತಕ್ಕೆ ಜತೆಯಾಗಿ ನರ್ತಿಸಲು ನಟಿ ಸಂಜನಾ ಮತ್ತು ತಂಡದವರು ಸಿದ್ಧರಾಗಿದ್ದಾರೆ.

 ಜತೆಗೆ ಸಂಗೀತ, ನೃತ್ಯ ಮತ್ತು ಬೆಳಕಿನ ಸಂಯೋಜನೆ ಸಮಕಾಲೀನ ನೃತ್ಯದ ‘ಮಂಡಲ’ ಕಳೆ ನೀಡಲಿದೆ. ಸುವರ್ಣ ಸ್ಟಾರ್ ಸಿಂಗರ್ ಸ್ಪರ್ಧೆ ವಿಜೇತರನ್ನು ಒಳಗೊಂಡ ‘ಅಂತರ್ಧ್ವನಿ’ ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದೆ. ಅನೇಕ ಶಾಲಾ ಮಕ್ಕಳೂ ಭಾಗವಹಿಸಿ ನಮ್ಮ ಮೆಚ್ಚಿನ ಬೆಂಗಳೂರಿಗರನ್ನು ಗೌರವಿಸಲಿದ್ದಾರೆ.

ಸ್ಥಳ: ಬೆಂಗಳೂರು ಅರಮನೆ ಆವರಣ (ವಸಂತನಗರ ಪ್ರವೇಶ ದ್ವಾರ). ಆಹ್ವಾನ ಪತ್ರಗಳಿಗೆ 99001 34919.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.