ADVERTISEMENT

ನೀರು ಇಟ್ಟವರು!

ಸುಮಲತಾ ಎನ್, ಪದ್ಮನಾಭ ಭಟ್ಟ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ನೆತ್ತಿ ಸುಡುವ ಬಿರು ಬಿಸಿಲಿನಲ್ಲಿ ತೊಟ್ಟು ನೀರು ಸಿಕ್ಕರೆ ಸಾಕು ಅನಿಸುತ್ತದೆ. ಆದರೆ ಆಧುನಿಕತೆಯ ಬಿರುಗಾಳಿಯಲ್ಲಿ ಊಟದೊಂದಿಗೆ ನೀರು ಸಹ ಪ್ಲಾಸ್ಟಿಕ್ ಡಬ್ಬದಲ್ಲಿ ಪ್ಯಾಕ್ ಆಗಿಬಿಟ್ಟಿದೆ. ನಗರದ ಬದುಕಿನಲ್ಲಿ ಎಲ್ಲರ ಕದಲಿಕೆಗಳ ನಡುವೆಯೂ ಅಲ್ಲೋ ಇಲ್ಲೋ ಅರವಟ್ಟಿಗೆ ಕಾಣಿಸಿಕೊಂಡಾಗ ಪರಂಪರೆಯ ಮಿಂಚು ಸುಳಿದುಹೋಗುತ್ತದೆ. 

ಬಾಟಲು ತರುವುದನ್ನು ತಾಯಿ ಮರೆತಿದ್ದಾರೆ. ಸುಡುಬಿಸಿಲಿನಲ್ಲಿ ಕೆಲವು ಗಜ ದೂರ ನಡೆದುಬಂದಿರುವ ಮಗುವಿನ ಗಂಟಲು ಒಣಗಿದೆ. ಅಕಸ್ಮಾತ್ತಾಗಿ ಆ ಮಗು ನೀರಿನ ಮಡಿಕೆಯೊಂದನ್ನು ನೋಡಿತು. ಆಧುನಿಕ ಕಾಲದ ತಾಯಿಗೆ ಶುಚಿತ್ವದ ಪ್ರಜ್ಞೆ.

ಮಡಿಕೆಯತ್ತ ಧಾವಿಸತೊಡಗಿದ ಮಗುವಿಗೆ ಬ್ರೇಕ್ ಹಾಕಿದ ತಾಯಿ, ಅನತಿ ದೂರದಲ್ಲಿದ್ದ ಅಂಗಡಿಯಲ್ಲಿ ದುಡ್ಡು ತೆತ್ತು ಮಿನರಲ್ ವಾಟರ್ ಕೊಂಡು, ಮಗುವಿನ ಬಾಯಿಗೆ ಆ ನೀರು ಕೊಟ್ಟರು. ಆ ಮಡಿಕೆಯಲ್ಲಿದ್ದದ್ದು ಶುಚಿಯಾದ ನೀರೇ ಎಂಬುದನ್ನು ಅಲ್ಲೇ ಇದ್ದ ಹಿರೀಕರೊಬ್ಬರು ಮನದಟ್ಟು ಮಾಡಿಸಿದರು. ಅವರು ಖುದ್ದು ತಾವೇ ಆ ನೀರು ಕುಡಿದು ತೋರಿಸಿದರು. `ಅರವಟ್ಟಿಗೆ ನೀರೆಂದರೆ ಪ್ರಸಾದ ಇದ್ದಂತೆ~ ಎಂದು ಭಾವುಕ ಮಾತನ್ನು ಹೊರಹಾಕಿದರು.

ಬೇಸಿಗೆಯಲ್ಲಿ ಹಕ್ಕಿಗಳಿಗಾಗಿ ಮನೆ ಮುಂದೆ ಗುಟುಕು ನೀರಿಡಿ ಎಂಬ ಪರಿಸರ ಪ್ರೇಮಿಗಳ ಮಾತೂ ಕೇಳಿಬರುತ್ತಿರುತ್ತದೆ. ಕೆಲವರು ನೀರು ಇಟ್ಟು, ಹಕ್ಕಿ ಕುಡಿಯುವುದನ್ನು ಕಣ್ತುಂಬಿಕೊಂಡೇ ಸಂತಸ ಪಡುವುದೂ ಉಂಟು. ಆದರೆ, ಮನುಷ್ಯರಿಗೆ ನೀರು ಕೊಡುವ ಕೈಗಳು ಮಾತ್ರ ವಿರಳ. ಈ ಹೊತ್ತಿನಲ್ಲಿ ಅರವಟ್ಟಿಗೆಗಳು ಅಪರೂಪವೂ ಅರ್ಥಪೂರ್ಣವೂ ಆಗಿ ಕಾಣುತ್ತವೆ.

ಬಿಸಿಲಿನಲ್ಲಿ ಬಳಲಿ ಬಂದು ನೀರು ಕೇಳಿದರೆ ಹೋಟೆಲ್, ಅಂಗಡಿಗಳಲ್ಲೂ ನೀರನ್ನು ಪುಕ್ಕಟೆ ಕೊಡುವುದಿಲ್ಲ. ನೀರಿಗೂ ವ್ಯಾಪಾರದ ನಂಟು. ಯಾವುದಾದರೂ ಮನೆಯಲ್ಲಿ ನೀರು ಕೇಳೋಣವೆಂದರೆ ಅವರಿಗೆ ನೀರು ಕೊಡಲೂ ಅನುಮಾನ. ಜೊತೆಗೆ ಕೇಳಲೂ ಹಿಂಜರಿಕೆ. ಆಗೆಲ್ಲಾ ನೆನಪಾಗುವುದೇ ಅರವಟ್ಟಿಗೆ.

ದಾರಿಯಲ್ಲಿ ಬಾಯಾರಿದಾಗ ನೀರು ಕುಡಿಯಲೆಂದು ಮಡಿಕೆಯಲ್ಲಿ ನೀರು ಇಡುತ್ತಿದ್ದ ವ್ಯವಸ್ಥೆಗೆ `ನೀರಿನ ಅರವಟ್ಟಿಗೆ~ ಎನ್ನುತ್ತಾರೆ. ಏಪ್ರಿಲ್ ತಿಂಗಳು ಬರುತ್ತಿದ್ದಂತೆ ಅಂಗಡಿ ಮುಂದೆಯೋ, ಮನೆ ಮುಂದೆಯೋ ಕಾಣಿಸಿಕೊಳ್ಳುತ್ತಿದ್ದ ಅರವಟ್ಟಿಗೆಗಳ ಸಂಖ್ಯೆ ಈಗ ಸ್ವಲ್ಪ ಕ್ಷೀಣಿಸಿದ್ದರೂ ಅಲ್ಲಲ್ಲಿ ಇದರ ಹಾಜರಿ ಇದ್ದೇ ಇರುತ್ತದೆ. ಜನ ಹೆಚ್ಚು ಓಡಾಡುವ ಸ್ಥಳದಲ್ಲಿ ಕೊಳಗ, ಮಡಿಕೆಗಳಲ್ಲಿ ನೀರನ್ನಿಡುವ ಪರಿಪಾಠವನ್ನು ಜನ ಇಂದಿಗೂ ನಡೆಸಿಕೊಂಡುಬಂದಿದ್ದಾರೆ.

ಅರವಟ್ಟಿಗೆ ಇಡುವುದು ಮೂಲತಃ ಹಳ್ಳಿಯಿಂದ ಬಂದ ಪದ್ಧತಿ. ಹಳ್ಳಿಯಿಂದ ಹಳ್ಳಿಗೆ ತೆರಳುವಾಗ ದಾರಿ ಮಧ್ಯೆ ದಾಹ ತೀರಿಸಿಕೊಂಡು ದಣಿವಾರಿಸಿಕೊಳ್ಳಲೆಂದು ಮನೆ ಮುಂದೆಯೇ ನೀರಿನ ಕುಡಿಕೆಗಳನ್ನು ಇಡುತ್ತಿದ್ದುದ್ದು ರೂಢಿ. ಆನೇಕಲ್ ಬಳಿಯಲ್ಲಿ ಅರವಟ್ಟಿಗೆಪುರ ಎಂಬ ಹಳ್ಳಿಯೇ ಇದೆ.

ಈ ಜಾಗದಲ್ಲಿ ಅರವಟ್ಟಿಗೆಗಳನ್ನು ಹೆಚ್ಚು ಇಡುತ್ತಿದ್ದ ಕಾರಣ ಈ ಹೆಸರು ಬಂದಿರಲೂಬಹುದು. ಅರವಟ್ಟಿಗೆಗಳಲ್ಲಿ ಮಜ್ಜಿಗೆ ಪಾನಕವನ್ನು ಇಡುತ್ತಿದ್ದ ಕಾಲವೂ ಇತ್ತು. ಇದು ನಮ್ಮ ಸಂಸ್ಕೃತಿ,  ಮನೋಭಾವದ ಸಂಕೇತವೂ ಆಗಿತ್ತು. ಪರಿಚಿತರು, ಅಪರಿಚಿತರು ಯಾರೇ ಇರಲಿ ನೀರನ್ನು ನಿಸ್ಸಂಕೋಚವಾಗಿ ಕುಡಿಯಲಿ ಎಂಬ ಸಣ್ಣ ಕಾಳಜಿ ಅಲ್ಲಿರುತ್ತಿತ್ತು.
ಮರಳಿನ ಗುಡ್ಡೆ ಮೇಲೆ ಮಡಿಕೆಯಲ್ಲಿ ನೀರಿಟ್ಟರೆ ಜನ ತಣ್ಣಗಿನ ನೀರು ಕುಡಿದು ಮುಂದಿನ ಹಾದಿ ಹಿಡಿಯುತ್ತಿದ್ದರು. ಇಂತಹ ಪರಿಪಾಠ ನಂತರ ನಗರದಲ್ಲೂ ಕಾಣಿಸಿಕೊಂಡಿತು. ಆದರೆ ಈಗ ನೀರು ಮತ್ತು ನೀರು ಕುಡಿಯುವವರ ಮನೋಭಾವವೂ ಬದಲಾಗಿದೆ.
 
ಜೊತೆಗೆ ನೀರೂ ವ್ಯಾಪಾರದ ವಸ್ತುವಾದ್ದರಿಂದ  ಅರವಟ್ಟಿಗೆ ಕಾಣಿಸಿಕೊಳ್ಳುವುದು ಸ್ವಲ್ಪ ಕಡಿಮೆಯಾದರೂ ಅಲ್ಲಲ್ಲಿ ತನ್ನ ಇರುವಿಕೆಯನ್ನು ಉಳಿಸಿಕೊಂಡಿದೆ. ವಿಜಯನಗರ, ಮೂಡಲ ಪಾಳ್ಯ, ಪೀಣ್ಯ, ಗುಟ್ಟಹಳ್ಳಿ, ಲಕ್ಕಸಂದ್ರ, ಮಲ್ಲೇಶ್ವರಂ, ಸಂಪಂಗಿರಾಮನಗರ, ರಾಮಮಂದಿರ, ಬನಶಂಕರಿ ಮುಂತಾದೆಡೆ ಅರವಟ್ಟಿಗೆಗಳನ್ನು ಈಗಲೂ ಕಾಣಬಹುದು. 
ನೀರಿನ ಕೊರತೆ, ಆರೋಗ್ಯದ ಬಗೆಗಿನ ಅತಿಯಾದ ಕಾಳಜಿ, ಶುಚಿತ್ವ ಅರವಟ್ಟಿಗೆ ಕಡಿಮೆಯಾಗಲು ಕಾರಣವೆನ್ನಬಹುದು.
 
ಎಲ್ಲೆಂದರಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿ ಎಂದು ಎಷ್ಟೇ ಕಷ್ಟವಾದರೂ ನೀರು ಕುಡಿಯದ ಮಂದಿ ಇದ್ದಾರೆ. ನೀರಿಗೆ ಮಲಿನತೆ ಇಲ್ಲ ಎಂಬ ಅಂದಿನ ನಂಬಿಕೆ ಈಗ ಉಳಿದುಕೊಂಡಿಲ್ಲ. ಅರವಟ್ಟಿಗೆ ನೀರನ್ನು ಕುಡಿಯಲು ಜನ ಹಿಂದೆ ಮುಂದೆ ನೋಡುತ್ತಾರೆ. ದುಡ್ಡು ಕೊಟ್ಟು ನೀರು ಕುಡಿಯುತ್ತಾರೆ.

ಏಪ್ರಿಲ್-ಮೇ ತಿಂಗಳಿನಲ್ಲಿ ನಮ್ಮ ಅಂಗಡಿ ಮುಂದೆ ಅರವಟ್ಟಿಗೆ ಇಡುತ್ತೇವೆ. ಇದು ಮೊದಲಿನಿಂದಲೂ ನಡೆಸಿಕೊಂಡುಬಂದಿದ್ದೇವೆ. ಆದರೆ ಅರವಟ್ಟಿಗೆ ನೀರು ಕುಡಿಯುವವರ ಸಂಖ್ಯೆ ಈಗ ಕಡಿಮೆ. ಮೊದಲೆಲ್ಲಾ ಜನ ನಿಸ್ಸಂಕೋಚವಾಗಿ ನೀರು ಕುಡಿಯುತ್ತಿದ್ದರು. ಈಗ ಹಾಗಲ್ಲ, ನೀರು ಕುಡಿಯಲೂ ಹಿಂದೆ ಮುಂದೆ ನೋಡುತ್ತಾರೆ.

ನಾವು ಮಡಿಕೆಯನ್ನು ಶುಚಿಯಾಗಿಟ್ಟಿರುತ್ತೇವೆ. ಹಲವರು ನೀರು ಕುಡಿದು ಸುಸ್ತು ನಿವಾರಿಸಿಕೊಂಡು ಹೋಗುತ್ತಾರೆ ಎನ್ನುತ್ತಾರೆ ಮಾರುತಿ ನಗರದ ಬಟ್ಟೆ ವ್ಯಾಪಾರಿ ಹರೀಶ್.

ಈ ಹೈಟೆಕ್ ಸಿಟಿಯಲ್ಲಿ ಎಲ್ಲವೂ ದುಬಾರಿ. ಇಲ್ಲಿ ಕುಡಿಯುವ ನೀರೂ ಬೆಲೆಬಾಳುತ್ತದೆ. ಇಂತಹ ಸಮಯದಲ್ಲಿ ಅರವಟ್ಟಿಗೆಗಳು ನಗರದಲ್ಲಿ ಇನ್ನೂ  ಕಾಣಿಸಿಕೊಳ್ಳುವುದು ವಿಶೇಷವೆನಿಸದೆ ಇರದು. ಜನ ಬದಲಾದರೂ, ಕಾಲ ಮುಂದೆ ಹೋದರೂ ಬದಲಾವಣೆಯಾಗದೆ ಉಳಿದ ಕೆಲವು ಪದ್ಧತಿ ಹಿತವೆನಿಸುತ್ತದೆ ಎಂಬುದಕ್ಕೆ ಅರವಟ್ಟಿಗೆಗಳೇ ಸಾಕ್ಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT