ADVERTISEMENT

ಪರಿಷತ್ತಿನಲ್ಲಿ ಮತ್ತೊಂದು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಯುವ ಚಿತ್ರಕಲಾವಿದರಾದ ರವಿ ಪೂಜಾರಿ ಮತ್ತು ಮಹೇಶ್ ರಾವಲ್ ಅವರು ತಮ್ಮ ಹೊಸ ರಚನೆಗಳ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸೆ. ಐದರಿಂದ ಒಂಬತ್ತವರೆಗೆ ಐದು ದಿನ ಪ್ರದರ್ಶನ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್. ರಾಮಕೃಷ್ಣ ಅವರು ಗುರುವಾರ ಸಂಜೆ 6ಕ್ಕೆ ಪ್ರದರ್ಶನವನ್ನು ಉದ್ಘಾಟಿಸುತ್ತಾರೆ. ಅತಿಥಿ: ಹಿರಿಯ ಕಲಾವಿದ ಡಾ.ಎಂ.ಎಸ್. ಮೂರ್ತಿ.

‘ಸ್ಪಿರಿಟ್ ಆಫ್ ಆರ್ಟ್’ ಹೆಸರಿನ ಈ ಪ್ರದರ್ಶನದಲ್ಲಿ ರವಿ ಪೂಜಾರಿಯವರ ‘ಕುದುರೆ’ ಸರಣಿಯ ರಚನೆಗಳು ಹಾಗೂ ಮಹೇಶ್ ಅವರ ಅಮೂರ್ತ ಚಿತ್ರಗಳನ್ನು ಕಾಣಬಹುದು.

ರವಿಪೂಜಾರಿಯವರು ಕುದುರೆಯನ್ನು ವಸ್ತುವಾಗಿಟ್ಟುಕೊಂಡು ನಗರದ ಆಧುನೀಕೃತ ಬದುಕನ್ನು ವಿವಿಧ ಆಯಾಮಗಳಲ್ಲಿ ಚಿತ್ರಿಸಿದ್ದಾರೆ. ಶರವೇಗದಲ್ಲಿ ಓಡುವ ಕುದುರೆಗಳು, ರೇಸ್‌ಕೋರ್ಸ್‌ನಲ್ಲಿ ಸ್ಪರ್ಧೆಗಾಗಿ ಓಡುತ್ತಿರುವ ಕುದುರೆಗಳು, ಒಂದು ಕಾಲಲ್ಲಿ ಗೋಧೂಳಿಯನ್ನು ಕೆದರಿ ಕೆನೆಯಲು ಸಜ್ಜಾದ ಕುದುರೆ, ಇಳಿಸಂಜೆಯ ಬಿಸಿಲ ಬಣ್ಣವನ್ನು ಹೊದ್ದು ನಿಂತಂತೆ ಕಾಣುವ ಕುದುರೆ, ನಗರದ ಕತ್ತಲಲ್ಲಿ ಕೆನೆದೆದ್ದು ನಿಂತ ಕುದುರೆ... ಹೀಗೆ ಬಹುಭಾವ,

ಬಹುಆಯಾಮಗಳಲ್ಲಿ ಕಂಡುಕೊಂಡಿರುವ ಕುದುರೆಗಳಿವೆ. ಮಹೇಶ್ ಅವರು ಪ್ರಕೃತಿಯನ್ನು ಅಮೂರ್ತಭಾವದಲ್ಲಿ ಚಿತ್ರಿಸಿದ್ದಾರೆ. ಅವರು ಬಳಸಿರುವ ಬಣ್ಣಗಳು ಪ್ರಕೃತಿಯು ಕಾಲಮಾನಕ್ಕೆ ತಕ್ಕುದಾಗಿ ಬದಲಾಗುವ ಪ್ರಕ್ರಿಯೆಯನ್ನು ಕಟ್ಟಿಕೊಡುವಂತಿವೆ.
ಪ್ರದರ್ಶನ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.