ADVERTISEMENT

ಬಲಶಾಲಿ ಮಾತು

ಮಾತ್‌ಮಾತಲ್ಲಿ

ಪ್ರಜಾವಾಣಿ ವಿಶೇಷ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ಮಾತು ಮನುಷ್ಯನಿಗೆ ದಕ್ಕಿದ ಬಹುದೊಡ್ಡ ಕಾಣಿಕೆ. ಒಟ್ಟಂದ ಅನುಭವಗಳು ಮಾತಿನ ಲಹರಿಯ ಮೂಲಕವೇ ಜಗತ್ತಿಗೆ ತಲುಪಲು ಸಾಧ್ಯ. ಹಾಗಾಗಿ ಪ್ರಕೃತಿಯ ಭಾಗವೆನಿಸಿರುವ ಮಾತು ಮೌನದಷ್ಟೆ ಬಲಶಾಲಿ ಹಾಗೂ ಪ್ರೇರಣಾಶಕ್ತಿ.

ಉತ್ತಮ ವಾಗ್ಮಿ ಎನಿಸಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಆದರೆ, ಅದು ನನಗೆ ಅನಾಯಾಸವಾಗಿ ಒದಗಿ ಬಂದಿದೆ.

ಮಾತುಗಾರಿಕೆ ಹಾಗೂ ಮಾಹಿತಿ ತೆಗೆಯುವ ಕೌಶಲಗಳೆರಡೂ ಇದ್ದುದ್ದರಿಂದ ಚಂದನ ವಾಹಿನಿಯಲ್ಲಿ  ‘ಆರೋಗ್ಯ ಭಾರತ’ ಹಾಗೂ ‘ಟಿ.ವಿ.ಡಾಕ್ಟರ್‌’ ಕಾರ್ಯಕ್ರಮಗಳನ್ನು  ನಡೆಸಿಕೊಡುತ್ತಿದ್ದೇನೆ. ನೂರಾರು ತಜ್ಞ ವೈದ್ಯರ ಸಂದರ್ಶನ ಮಾಡಿದ್ದೇನೆ. ಕಾಯಿಲೆಗಳ ಬಗ್ಗೆ ವಿಸ್ತೃತವಾದ  ಮಾಹಿತಿ ಒದಗಿಸುವ ಕಾರ್ಯಕ್ರಮಕ್ಕೆ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಆಪರೇಷನ್ ಥಿಯೇಟರ್‌ನಲ್ಲಿ ಬಿಡುವಿಲ್ಲದೇ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಹೃದಯತಜ್ಞರೊಂದಿಗೆ ಒಂದು ಗಂಟೆ ಚರ್ಚೆ ನಡೆಸುವುದು ಒಂದು ಬಗೆಯ ಸವಾಲೇ ಆದರೂ ಅದರಲ್ಲಿ ಖುಷಿಯಿದೆ.

ಮೊದಲಿನಿಂದಲೂ ನನಗೆ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವುದೆಂದರೆ ಆಸಕ್ತಿ. ಹಾಗಾಗಿಯೇ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಖಚಾಂಚಿಯಾಗಿ ಕಳೆದ 30 ವರ್ಷ ಕೆಲಸ ಮಾಡಿದ್ದೇನೆ.

ಹುಟ್ಟಿ ಬೆಳೆದಿದ್ದು ಇದೇ ಬೆಂಗಳೂರಿನಲ್ಲಿ. ದೇಶದಾದ್ಯಂತ ಪ್ರವಾಸ ಹೋಗುವ ಹುಚ್ಚಿದೆ. ಕನ್ನಡ, ಇಂಗ್ಲಿಷ್ ಯಾವುದಾದರೊಂದು ಪುಸ್ತಕ ತಿರುವಿ ಹಾಕುವುದು ನೆಚ್ಚಿನ ಕೆಲಸ.

ನೂರು ಬಾರಿ ರಕ್ತದಾನ ಮಾಡಿದ್ದೇನೆ. ಆಗಾಗ ರಕ್ತದಾನ ಶಿಬಿರಗಳನ್ನು ಸಂಘಟಿಸುತ್ತಿದ್ದೇನೆ. ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ವೈದ್ಯಕೀಯ ಹಾಗೂ ಆರ್ಥಿಕ ಸೇವೆ ಒದಗಿಸುವುದು ಕೂಡ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ರಾಷ್ಟ್ರೀಯ ರೆಡ್‌ಕ್ರಾಸ್‌ನಲ್ಲಿ ಸದಸ್ಯನಾಗಿ ಮದರ್ ತೆರೇಸಾ ಅವರನ್ನು ಭೇಟಿಯಾಗಿದ್ದು ಇಂದಿಗೂ ಒಂದು ಸವಿನೆನಪು. ಮಾತೃತ್ವ ಹಾಗೂ ಕರುಣೆಗೆ ಹೆಸರಾದ ಆ ತಾಯಿ ಬಡ ಮಕ್ಕಳನ್ನು ಅಪ್ಪಿ ಮುದ್ದಾಡುವ ಪರಿಯೇ ಚಂದ.

ಬದುಕಿನಲ್ಲಿ ಇಂತಹುದೇ ಮಾಡಬೇಕು ಎಂದು ಕನಸು ಇಟ್ಟುಕೊಂಡವನಲ್ಲ. ಬಂದ ಅವಕಾಶಗಳನ್ನೆಲ್ಲ ಸ್ವೀಕರಿಸುತ್ತಾ, ಸಮಾಜಕ್ಕೆ ಎಳ್ಳಷ್ಟು ಉಪಯೋಗವಾಗುವಂತೆ ಬದುಕುವ ಕಲೆಯನ್ನು ರೂಢಿಸಿಕೊಳ್ಳುತ್ತಿದ್ದೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.