ADVERTISEMENT

ಭರವಸೆಯ ಕಲಾವಿದರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಬೆಂಗಳೂರು ವಿಶ್ವವಿದ್ಯಾಲಯದ 15 ಲಲಿತ ಕಲಾ ಸ್ನಾತಕೋತ್ತರ ಪದವೀಧರರ `ಪ್ಯೂಪ~ ತಂಡ ಕಸ್ತೂರಬಾ ರಸ್ತೆ ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಆಯೋಜಿಸಿರುವ ಕಲಾ ಪ್ರದರ್ಶನ ಇಂದು ಮುಕ್ತಾಯವಾಗಲಿದೆ. ಆಧುನೀಕರಣದ ಪ್ರಭಾವ, ಸ್ವಂತಿಕೆಯ ಅಭಿವ್ಯಕ್ತಿಯೇ ಪ್ರದರ್ಶನದ ಹೈಲೈಟ್.

ಮದರ್ ವೂಂಬ್ ಶೀರ್ಷಿಕೆಯಲ್ಲಿ ಇನ್‌ಸ್ಟಾಲೇಷನ್ ಕಲೆಯನ್ನು ಅಮೃತಾ ಅಭಿವ್ಯಕ್ತಿಸಿದ್ದಾರೆ. ಸಾಂಪ್ರದಾಯಿಕವಾಗಿ ಭಾರತೀಯ ಪರಂಪರೆಯಲ್ಲಿ ಸ್ತ್ರೀಗೆ ಮಹತ್ವ, ಪೂಜ್ಯಭಾವನೆ ನೀಡಲಾಗಿದೆ ಎನ್ನುವುದನ್ನು ಹತ್ತಿ ಬಟ್ಟೆಯ ಮೇಲೆ `ಹನಿಕೊಂಬ~ ಅಳವಡಿಸುವ ಮೂಲಕ ಪ್ರಕಟಪಡಿಸಿದ್ದಾರೆ.

ಆರೋಗ್ಯ ಸ್ವಾಮಿಯವರು ತಮ್ಮ  ಶರೀರದ ಭಾಗಗಳನ್ನೇ ಆಧರಿಸಿ ಕಲಾಕೃತಿ ಮುದ್ರಿಸಿದ್ದಾರೆ. ಹಂಸ ಅವರ ಕಲೆಯಲ್ಲಿ ಚಂಚಲ ಮನಸ್ಸಿನ ಖಿನ್ನತೆ ಒಡಮೂಡಿದೆ.  ಕಿರಣ್ ಅವರ ಛಾಯಚಿತ್ರವು ಸ್ವಾಭಾವಿಕವಾಗಿದ್ದು ಮುಗ್ಧತೆಯನ್ನು ಸಂಕೇತಿಸುತ್ತದೆ.

ಜೆ. ವಿದ್ಯಾ ಅವರ ಶೀರ್ಷಿಕೆ ರಹಿತ ಚಿತ್ರ ವಿದ್ಯುತ್ ಸ್ವಿಚ್ ಬೋರ್ಡ್‌ನ ಒಳವಿನ್ಯಾಸದ ಮೂಲಕ ನೈಜವಾಗಿ, ಮೂಡಿಬಂದಿದೆ. ಬ್ರಹ್ಮನಾಥ.ಎ. ಪಾಟೀಲರ `ಬ್ರೋಕನ್ ಬ್ರೇನ್~ ಚಿಂತನೆಗೆ ಹಚ್ಚುತ್ತದೆ. ಎನ್. ಬೈರಾಚಾರ್ ಅವರ ಅಮೂರ್ತ ಚಿತ್ರ, ದೀಪಕ್, ಮಹಮ್ಮದ್ ಯೂನೀಸ್, ರಾಕೇಶ ಕಲ್ಲೂರ, ಎ. ಸುಜಾ, ಕೆ.ಟಿ. ಶಿವಪ್ರಸಾದ, ಚಂದ್ರಕಾಂತ, ಶ್ವೇತಾ ಪ್ರಿಯದರ್ಶಿನಿ, ಉಲ್ಲಾಸ್ ಅವರ ಕಲಾಕೃತಿಗಳು ಮನ ಸೆಳೆಯುತ್ತವೆ.

ಈಗಿನ ಯುವ ಕಲಾವಿದರ ಚಿಂತನೆ, ಯೋಚನೆ ಮತ್ತು ಅಭಿವ್ಯಕ್ತಿಯ ಹುಡುಕಾಟವನ್ನು ಅವರ ಕಲಾಕೃತಿಗಳಲ್ಲಿ ಗುರುತಿಸಬಹುದು.  ಕಲಾ ಜಗತ್ತಿನ ಪ್ರಯಾಣ ಎತ್ತೆತ್ತಲೋ ಸಾಗುತ್ತಿದ್ದರೂ ಈ ಯುವ ಕಲಾವಿದರು, ಅದರ ಅನುಭವ ಪಡೆಯುತ್ತಿರುವುದು ಶ್ಲಾಘನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.