ADVERTISEMENT

ಮುತ್ತಗೌಡ ಸನ್ಮಾನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 19:30 IST
Last Updated 15 ಏಪ್ರಿಲ್ 2011, 19:30 IST

ಅಗ್ನಿ ಸೇವಾ ಟ್ರಸ್ಟ್:  ವೀರಾಂಜನೇಯ ಯಕ್ಷ ಮಿತ್ರ ಮಂಡಳಿ ಬಂಗಾರಮಕ್ಕಿ, ಚಿಟ್ಟಾಣಿ ತಂಡದಿಂದ ‘ರಾಜಾ ರುದ್ರಕೋಪ’ ಯಕ್ಷಗಾನ (ಮೇಳದಲ್ಲಿ: ಕೊಳಗಿ ಕೇಶವ ಹೆಗಡೆ, ಎ.ಪಿ.ಪಾಠಕ್, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಶಿವಕುಮಾರ್, ಬೇಗಾರು, ಶಂಕರ ಬಾಳೇಕುದ್ರು, ಸುಬ್ರಾಯ ಹೆಬ್ಬಾರ ಬಲ್ಲೋಣ, ಅರ್ಪಿತಾ ಹೆಗಡೆ). ನಂತರ ಬಡಗುತಿಟ್ಟಿನ ಬಹುಮುಖ ಪ್ರತಿಭೆಯ ಕಲಾವಿದ ಕೊಪ್ಪಾಟೆ ಮುತ್ತಗೌಡ ಅವರಿಗೆ ಸನ್ಮಾನ.

ಬಡಗುತಿಟ್ಟು ಯಕ್ಷಗಾನ ಕಲಾವಿದರಲ್ಲಿ ಕೊಪ್ಪಾಟೆ ಮುತ್ತಗೌಡ ಅವರ ಹೆಸರು ಪ್ರಮುಖವಾದದ್ದು. ಇವರು ಕುಂದಾಪುರ ತಾಲ್ಲೂಕಿನ ಕಾಲ್ತೋಡು ಗ್ರಾಮದ ಅಣ್ಣಪ್ಪ ಗೌಡ ಮತ್ತು ಅಕ್ಕಣಿಯವರ ಮಗ. ಬಾಲ್ಯದಲ್ಲಿಯೇ ಚಂಡೆ ಮದ್ದಳೆಗಳ ಶಬ್ದಕ್ಕೆ ಆಕರ್ಷಿತರಾಗಿ ಯಕ್ಷಗಾನದತ್ತ ತಮ್ಮ ಒಲವನ್ನು ಬೆಳೆಸಿಕೊಂಡವರು. 10ನೇ ವಯಸ್ಸಿನಲ್ಲಿಯೇ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟುವ ಮೂಲಕ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದರು.

ಮಾರಣಕಟ್ಟೆ, ಅಮೃತೇಶ್ವರಿ, ಸಾಲಿಗ್ರಾಮ, ಪೆರ್ಡೂರು, ಇಡಗುಂಜಿ, ಸೌಕೂರು, ಮಂದರ್ತಿ, ಮಡಾಮಕ್ಕಿ, ಕಳವಾಡಿ, ನಾಗರಕೊಡಿಗೆ ಮುಂತಾದ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವ ಕೊಪ್ಪಾಟೆಯವರದು. ರಾಮಾಯಣದ ರಾಮ, ರಾವಣ, ವಿಭೀಷಣ, ಇಂದ್ರಜಿತು, ಅತಿಕಾಯ ಪ್ರಹಸ್ತ, ವಾಲಿ, ಸುಗ್ರೀವ, ಹನುಮಂತ, ಅಂಗದ, ಲಕ್ಷ್ಮಣ, ಭರತ, ಮಹಾಭಾರತದ ಧರ್ಮರಾಯ, ಭೀಮ, ಅರ್ಜುನ, ಕೃಷ್ಣ, ಕರ್ಣ, ಕೌರವ, ಶಲ್ಯ, ಕೀಚಕ, ಪಾತ್ರಗಳನ್ನು ಮಾಡಿ ಜನರಿಂದ ಸೈ ಎನ್ನಿಸಿಕೊಂಡವರು.

ಭಸ್ಮಾಸುರ, ವಿಶ್ವಾಮಿತ್ರ, ಜಮದಗ್ನಿ, ಹರಿಶ್ಚಂದ್ರ, ನಳ, ಕಾರ್ತವೀರ್ಯ ಇವರಿಗೆ ಹೆಸರು ತಂದುಕೊಟ್ಟ ಪಾತ್ರಗಳು. ತಾಳಮದ್ದಳೆಯಲ್ಲಿ ಅರ್ಥ ಹೇಳುವುದು ಕೊಪ್ಪಾಟೆಯವರ ಇನ್ನೊಂದು ಹವ್ಯಾಸ, ರಾಮಾಯಣ, ಮಹಾಭಾರತ ಪ್ರವಚನ ಮೂಲಕ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.  ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ. ಸಂಜೆ 5.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.