ಬಾಲ್ಯದಿಂದಲೂ ನೃತ್ಯದ ಒಲವು ಮೈಗೂಡಿಸಿಕೊಂಡ ಮೃಣಾಲಿ ಸತೀಶ್ ಕುಮಾರ್, ತನಗೆ ತೋಚಿದಂತೆ ಹೆಜ್ಜೆ ಹಾಕುತ್ತ ನರ್ತಿಸುವ ಆಸಕ್ತಿಯನ್ನು ಬಳೆಸಿಕೊಂಡವಳು. ಅದನ್ನು ಗುರುತಿಸಿದ ಆಕೆಯ ತಾಯಿ ಮೀನಾ ಮತ್ತು ತಂದೆ ಸತೀಶ್ ಕುಮಾರ್, ಮಗಳ ಕಲಾ ಪೋಷಣೆಗೆ ಆದ್ಯತೆ ನೀಡಿದರು. 6ನೇ ವಯಸ್ಸಿಗೇ ಭರತನಾಟ್ಯ ಕಲಿಗೆ ಕಳುಹಿಸಿದರು.
ಅಂತರರಾಷ್ಟ್ರೀಯ ಖ್ಯಾತಿಯ ‘ಶಿವಪ್ರಿಯ’ ನೃತ್ಯಶಾಲೆಯ ನಾಟ್ಯಗುರು ಡಾ.ಸಂಜಯ್ ಶಾಂತಾರಾಂ ಅವರ ಮಾರ್ಗದರ್ಶನದಲ್ಲಿ ಬಹು ಬೇಗ ಅಡವು, ಹಸ್ತಚಲನೆಗಳನ್ನು ಕಲಿತು ಸುಂದರವಾಗಿ ನರ್ತನ ಮಾಡುವುದನ್ನು ರೂಢಿಸಿಕೊಂಡ ಮೃಣಾಲಿ, ನೃತ್ಯಕ್ಕೆ ಸಂಬಂಧಿಸಿದ ಜ್ಯೂನಿಯರ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದಾಳೆ.
ಡಾ.ಸಂಜಯ್ ಮತ್ತು ಸಜಿನಿ ಅವರ ಸಮರ್ಥ ತರಬೇತಿಯಡಿ ರೂಪುಗೊಂಡ ಮೃಣಾಲಿ, ಶಿವಪ್ರಿಯ ನೃತ್ಯ ಸಂಸ್ಥೆ ಆಯೋಜಿಸುವ ರೂಪ-ವಿರೂಪ, ನಕ್ಷತ್ರ, ಕರ್ನಾಟಕ ವೈಭವ, ನವರಸ ಕೃಷ್ಣ ಮತ್ತು ರಾಜಾಸಿಂಹ ಮುಂತಾದ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಕಲಾರಸಿಕರ ಗಮನ ಸೆಳೆದಿದ್ದಾಳೆ. ಕಠಿಣ ಪರಿಶ್ರಮ, ನಿಷ್ಠೆಯಿಂದ ನೃತ್ಯಾಭ್ಯಾಸ ಮಾಡುತ್ತಿರುವ ಮೃಣಾಲಿ, ಸಿಂಧ್ ಹೈಸ್ಕೂಲಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕ್ರೀಡೆಯಲ್ಲೂ ಮುಂದಿರುವ ಆಕೆ, ವಾಲಿಬಾಲ್ ಮುಂತಾದ ಆಟಗಳಲ್ಲಿ ಶಾಲಾ ಮಟ್ಟದಲ್ಲಿ ಬಹುಮಾನಗಳನ್ನು ಪಡೆದಿದ್ದಾಳೆ. ಚಿತ್ರ ಕಲಾವಿದೆಯೂ ಹೌದು.
ನೃತ್ಯ ತರಬೇತಿ ಪಡೆದು ಮೃಣಾಲಿ ಇದೀಗ ತನ್ನ ರಂಗಪ್ರವೇಶ ನೆರವೇರಿಸಿಕೊಳ್ಳಲು ಸಜ್ಜಾಗಿದ್ದಾಳೆ. ಜೂನ್ 3ರಂದು ಸಂಜೆ 6 ಗಂಟೆಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ತನ್ನ ಕಲಾಪ್ರತಿಭೆಯನ್ನು ಪ್ರದರ್ಶಿಸಲು ಉತ್ಸುಕಳಾಗಿದ್ದಾಳೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.