ಯಕ್ಷೋತ್ಸವ
ಬನಶಂಕರಿಯ ಯಕ್ಷಸಂಪದ ಸಂಸ್ಥೆಯಿಂದ ಬುಧವಾರ ಮತ್ತು ಗುರುವಾರ ‘ಯಕ್ಷೋತ್ಸವ’. ಇದರ ಅಂಗವಾಗಿ ಬುಧವಾರ ‘ವೀರ ವೃಷಸೇನ’ ಮತ್ತು ‘ಪ್ರಮೀಳಾರ್ಜುನ’ ಯಕ್ಷಗಾನ ಪ್ರದರ್ಶಿಸಲಿದೆ.
ಹಿಮ್ಮೇಳ: ಗುಂಡ್ಮಿ ರಘುರಾಮ್, ನಾರಾಯಣ ಹೆಬ್ಬಾರ ಕಲಚೆ, ಶ್ರೀನಿವಾಸಪ್ರಭು, ಲಕ್ಷ್ಮೀನಾರಾಯಣ ನಾವುಡ. ಕಲಾವಿದರು: ನಾಗರಾಜ ಶೇರೆಗಾರ್, ಸತ್ಯನಾರಾಯಣ ರಾವ್, ಪ್ರಕಾಶ್ ಕಮಲಶಿಲೆ, ಪ್ರಶಾಂತ್ ಹೆಗಡೆ, ವಿಶ್ವನಾಥ ಅಡಿಗ, ರಾಧಾಕೃಷ್ಣ ಬೆಳಿಯೂರ್, ಶ್ರೀಪಾದ ಹೆಗಡೆ, ನಾಗರಾಜ್ ಪಂಚಲಿಂಗ, ನಾಗರಾಜ್ ತಂತ್ರಿ, ಅನಂತ್ ಭಟ್, ಆನಂದ ಭಟ್. ನಿರ್ದೇಶನ: ಎ. ಶ್ರೀನಿವಾಸ ಅಲ್ಸೆ.
ಸ್ಥಳ: ಶ್ರೀ ವಾದಿರಾಜ ಕಲ್ಯಾಣ ಮಂದಿರ, ನೆಟ್ಟಕಲ್ಲಪ್ಪ ವೃತ್ತ, ಬಸವನಗುಡಿ. ಸಂಜೆ 5.30.
ಕೂಚಿಪುಡಿ ‘ದಿವ್ಯ’ಪ್ರತಿಭೆ
ಎಡಿಎ ರಂಗಮಂದಿರಲ್ಲಿ ಇತ್ತೀಚೆಗೆ ನಡೆದ ದಿವ್ಯಾ ನಟರಾಜ್ ಅವರ ಕೂಚಿಪುಡಿ ರಂಗಪ್ರವೇಶ, ಈ ನೃತ್ಯ ಪ್ರಕಾರದಲ್ಲಿ ಆಕೆ ಸಾಧಿಸಿರುವ ಹಿಡಿತಕ್ಕೆ ಸಾಕ್ಷಿಯಾಗಿತ್ತು.
ದಿವ್ಯಾ, ನಗರದ ಪ್ರಸಿದ್ಧ ಕೂಚಿಪುಡಿ ನೃತ್ಯಶಾಲೆಯಾದ ನಾಟ್ಯಸರಸ್ವತಿ ಇನ್ಸ್ಟಿಟ್ಯೂಟ್ನ ಡಾ. ಸರಸ್ವತಿ ರಜತೇಶ್ ಅವರ ಶಿಷ್ಯೆ. ಹಲವು ನೃತ್ಯ ಉತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ. ಆರ್ಸಿ ಕಾಲೇಜಿನಲ್ಲಿ ಫೈನಾನ್ಸ್ ಮತ್ತು ಅಕೌಂಟಿಂಗ್ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ.
ಗಣೇಶ ಕೌತವಂನೊಂದಿಗೆ ಕಾರ್ಯಕ್ರಮ ಆರಂಭಿಸಿ ಪುರಂದರದಾಸರ ಕೃತಿಯಾದ ‘ಎಲ್ಲಿರುವೆಯೊ ರಂಗಾ’ವನ್ನು ಮನೋಜ್ಞವಾಗಿ ಪ್ರದರ್ಶಿಸಿದರು. ಗಜೇಂದ್ರ ಮೋಕ್ಷ, ಪ್ರಹ್ಲಾದ ಕಥನ, ದ್ರೌಪದಿ ವಸ್ತ್ರಾಪಹರಣಂ, ವಿಶ್ವರೂಪ ದರ್ಶನ ಮುಂತಾದ ದೃಶ್ಯಗಳನ್ನು ಮನಮುಟ್ಟುವಂತೆ ಅಭಿನಯಿಸಿದರು. ಆನಂತರ ಸತ್ಯಭಾಮ ಪ್ರವೇಶ, ಶಿವ ತಾಂಡವಗಳನ್ನು ಅಭಿನಯಿಸಿದರು.
ಡಾ. ಸರಸ್ವತಿ ಮತ್ತು ವೇದಾಂತಂ ರಾಮು (ನಟುವಾಂಗ), ರಮಾ ಜಗನ್ನಾಥ್ (ಸಂಗೀತ), ಗಣೇಶ (ಮೃದಂಗ), ರಾಜಗೋಪಾಲ (ರಿದಂ), ಬಾಲಕೃಷ್ಣ (ಪಿಟಿಲು), ಗೋಪಾಲ (ಕೊಳಲು) ಕಾರ್ಯಕ್ರಮದ ಗಾಂಭೀರ್ಯ ಹೆಚ್ಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.