ADVERTISEMENT

ಯೇಸುದಾಸ್ ಹೃದಯರಾಗ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 19:30 IST
Last Updated 14 ಫೆಬ್ರುವರಿ 2011, 19:30 IST

ಗಾನಗಂಧರ್ವ ಎಂದೇ ಹೆಸರಾದ ಖ್ಯಾತ ಹಿನ್ನೆಲೆ ಗಾಯಕ ಡಾ. ಕೆ.ಜೆ. ಯೇಸುದಾಸ್ ಕಂಠಸಿರಿಗೆ ಸ್ವರ್ಣ ಸಂಭ್ರಮ. ಜತೆಗೆ ಅವರಿಗೆ 71 ವರ್ಷ.

ಶಾಸ್ತ್ರೀಯ ಸಂಗೀತದ ಹಿನ್ನೆಲೆಯಿಂದ ಬಂದಿರುವ ಯೇಸುದಾಸ್ ಈವರೆಗೆ 55 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಹಿನ್ನೆಲೆ ಗಾಯನಕ್ಕಾಗಿ ಏಳು ಬಾರಿ ರಾಷ್ಟ್ರೀಯ ಪ್ರಶಸ್ತಿ, 30 ರಾಜ್ಯ  ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಅಸ್ಸಾಮಿ, ಕೊಂಕಣಿ, ಕಾಶ್ಮೀರಿ ಹೊರತುಪಡಿಸಿ ಉಳಿದೆಲ್ಲ ಭಾರತೀಯ ಭಾಷೆಗಳಲ್ಲಿ ಹಾಡಿದ ಅಪರೂಪದ ಕಲಾವಿದ ಅವರು. ರಷ್ಯನ್, ಅರೆಬಿಕ್, ಲ್ಯಾಟಿನ್ ಹಾಗೂ ಇಂಗ್ಲಿಷ್‌ಗಳಲ್ಲೂ ಅವರ ಕಂಠಸಿರಿ ದಾಖಲಾಗಿದೆ. ಈ ಅಪೂರ್ವ ಗಾಯಕನ ಐದು ದಶಕಗಳ ಸಂಗೀತ ಸೇವೆಯನ್ನು ಗೌರವಿಸಲು ಬೆಂಗಳೂರು ರೋಟರಿ (3190 ಜಿಲ್ಲೆ) ಸಂಸ್ಥೆ ನಿರ್ಧರಿಸಿದೆ. ‘ಸಮರ್ಪಣ 71’ ಎಂಬ ಕಾರ್ಯಕ್ರಮದಡಿ ‘ಹೃದಯರಾಗ’ ಸಂಗೀತ ರಸಮಂಜರಿ ಆಯೋಜಿಸಿದೆ. ಈ ಮೂಲಕ ಸಂಗ್ರಹವಾಗುವ ಹಣವನ್ನು 71 ಉಚಿತ ಹೃದಯ ಶಸ್ತ್ರಚಿಕಿತ್ಸೆ, 71 ಉಚಿತ ಡಯಾಲಿಸಿಸ್, 71 ಉಚಿತ ನೇತ್ರ ಶಸ್ತ್ರಕ್ರಿಯೆ, 71 ಉಚಿತ ಪೋಲಿಯೊ ಕರೆಕ್ಟಿವ್ ಶಸ್ತ್ರಕ್ರಿಯೆ, ಕೃತಕ ಕಾಲು ಜೋಡಣೆ, ದಂತ, ಮಧುಮೇಹ, ಆರೋಗ್ಯ ಶಿಬಿರ ಆಯೋಜನೆ, 71 ಮಕ್ಕಳಿಗೆ ಉಚಿತ ಕಿಮೋಥೆರಪಿ ಮಾಡಲು ಜಯದೇವ, ಮಣಿಪಾಲ, ನಾರಾಯಣ ಹೃದಯಾಲಯ, ಶಾರದಾ, ರಂಗದೊರೆ, ರಾಮಯ್ಯ, ರೋಟರಿ ಆಸ್ಪತ್ರೆಗಳಿಗೆ ದೇಣಿಗೆ ನೀಡಲಾಗುತ್ತದೆ.

ರೋಟರಿ 3190 ಜಿಲ್ಲೆ: ಬುಧವಾರ ಹೆಸರಾಂತ ಗಾಯಕ ಯೇಸುದಾಸ್ ಗೌರವಾರ್ಥ ‘ಹೃದಯರಾಗ’ ಸಂಗೀತ ಸಂಜೆ. ದಕ್ಷಿಣ ಭಾರತದ ಹಿರಿಯ ನಟರು, ಗಾಯಕರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯೇಸುದಾಸ್ ಅವರಿಂದಲೂ ಸಂಗೀತ ಕಾರ್ಯಕ್ರಮ.

ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ (ಮೇಕ್ರಿ ವೃತ್ತದ ಬಳಿ). ಸಂಜೆ 6. ದೇಣಿಗೆ ಪಾಸ್‌ಗಳಿಗೆ:

ಬೆಂಗಳೂರಿನ ಎಲ್ಲಾ ರೋಟರಿ ಶಾಖೆಗಳು, ಸಂಗೀತಾ ಮೊಬೈಲ್ ಮಳಿಗೆಗಳು, www.indianstage.in ,
93412 15026. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.