ADVERTISEMENT

ರಂಗಶಂಕರದಲ್ಲಿ ಸೂತಕ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಸಿಂಚನ ತಂಡದಿಂದ ಬುಧವಾರ (ಜ.25) ಋಣವೆಂಬ ಸೂತಕವು ನಾಟಕ ಪ್ರದರ್ಶನ.
ಹಸಿವು, ಬಡತನಗಳ ಬೇಗೆಯಿಂದ ತನ್ನನ್ನು, ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು, ತನ್ನ ಆದಾಯದ ಮಿತಿಯನ್ನು ಅರಿತು ಸಾಲ ಮಾಡುವುದು ಹಲವು ಬಾರಿ ಅನಿವಾರ್ಯವಾಗಬಹುದು. ಜಾಗರೂಕತೆಯಿಂದ ಇಂತಹ ಸಣ್ಣ ಪುಟ್ಟ ಋಣದಿಂದ ಹೊರ ಬರುವವನು ಜಾಣ. ವಿಲಾಸೀ ಜೀವನ, ವ್ಯಸನಗಳು, ತೋರಿಕೆಯ ಆಡಂಬರ, ಅರ್ಥಹೀನ ಡಂಬಾಚಾರಗಳು ತನ್ನ ಯೊಗ್ಯತೆಗೆ ಮೀರಿದ ಐಶಾರಾಮಿ ಜೀವನ ದಕ್ಕಿಸಿಕೊಳ್ಳಲು ಮುಂದಾಲೋಚನೆ ಇಲ್ಲದೆ ಮಾಡುವ ಸಾಲ ಸ್ವಯಂ ಕೃತ ಅಪರಾಧ.
ಇಂತಹವರು ತಮ್ಮ ಹೀನ ಸ್ಥಿತಿಗೆ ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕು. ಇವೆರಡಕ್ಕಿಂತ ಅಪಾಯಕಾರಿ ಎಂದರೆ ತಮ್ಮ ಅಧಿಕಾರ ಲೋಲುಪತೆ, ಸ್ವಾರ್ಥ ಸಾಧನೆಗಳಿಗಾಗಿ ದೇಶದ ಇಡೀ ಜನತೆಯನ್ನು ಋಣದ ಕೂಪಕ್ಕೆ ತಳ್ಳಿ, ಅವರು ಪಡುವ ಸಂಕಟಗಳ ಬಗ್ಗೆ ಯಾವ ಪಾಪಪ್ರಜ್ಞೆಯೂ ಇಲ್ಲದೆ ದರ್ಪದಿಂದ ಮೆರೆಯುವ ರಕ್ತ ಪಿಪಾಸುಗಳ ಮುಖವನ್ನು ನಾಟಕ ಬಿಚ್ಚಿಡುತ್ತದೆ.

ಹಾಸ್ಯ, ವಿಡಂಬನೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಎಚ್ಚರಿಕೆಯ ಗಂಟೆ ಬಾರಿಸುವ ನಾಟಕ ಋಣವೆಂಬ ಸೂತಕವು. ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕೆಲಸವನ್ನು ಕಳೆದುಕೊಂಡು, ಕ್ರೆಡಿಟ್ ಕಾರ್ಡಿನ ಜಾಲದಲ್ಲಿ ಸಿಲುಕಿ ಪರದಾಡುತ್ತಿರುವ ಸಮಯದಲ್ಲಿ ರಮಾ- ರಂಗಸ್ವಾಮಿ ದಂಪತಿಯ ನೆರವಿಗೆ ಬರುವವರೆಲ್ಲ ಅವರ ಋಣದ ಭಾರವನ್ನು ಒಂದಲ್ಲ ಒಂದು ರೀತಿಯಲ್ಲಿ ಹೆಚ್ಚಿಸುವ ಸೂಚನೆಗಳೇ ಕಂಡುಬರುತ್ತದೆ. ಅವುಗಳನ್ನೆಲ್ಲ ತಿರಸ್ಕರಿಸಿ, ಸರಳ ಬದುಕಿಗೆ ತಮ್ಮದೇ ಆದ ಸೂತ್ರವನ್ನು ಕಂಡುಕೊಳ್ಳುವ ನಿರ್ಧಾರ ಮಾಡುತ್ತಾರೆ ಈ ದಂಪತಿ.

ಎಂ.ಸಿ. ಆನಂದ್ ರಚಿಸಿ ನಿರ್ದೇಶಿಸಿರುವ ನಾಟಕದಲ್ಲಿ ಎಸ್. ಶಿವರಾಂ, ಭಾರ್ಗವಿ ನಾರಾಯಣ್, ಬಿ.ಆರ್.ಜಯರಾಂ, ಮನೋಹರ ಕುಲಕರ್ಣಿ, ಪುಷ್ಪಾ ಬೆಳವಾಡಿ, ಅಭಿರುಚಿ ಚಂದ್ರು, ರಾಜೇಶ್ ಭಗ್ನ, ಸಂತೋಷ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ADVERTISEMENT

ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ. ಸಂಜೆ 7.30. ಮಾಹಿತಿಗೆ: 99800 07239

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.