ಕೈಯಲ್ಲಿ ಕನಸಿನ ಮನೆಯ ನಕಾಶೆ, ಮನದಲ್ಲಿ ನಾನಾ ತರಹದ ನಿರೀಕ್ಷೆ. ಇವರೆಲ್ಲ ವಿದ್ಯಾರ್ಥಿಗಳು. ಸ್ಪರ್ಧೆ ಗೆಲ್ಲಬೇಕೆನ್ನುವ ಛಲ ಅವರ ಮುಖದಲ್ಲಿ.
ಇದು ಸೆಂಚುರಿ ರಿಯಲ್ ಎಸ್ಟೇಟ್ ಮತ್ತು ಬಿಎಂಎಸ್ ಕಾಲೇಜು ಜಂಟಿಯಾಗಿ ಆರ್ಕಿಟೆಕ್ಟ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ’ಸೆಂಚುರಿ ಗೋಲ್ಡನ್ ಬ್ರಿಕ್’ ಸ್ಪರ್ಧೆಯ ಒಂದು ನೋಟ.
ಒಂದೆಡೆ ಹಿರಿಯ ನಾಗರಿಕರ ವಸತಿಗಾಗಿ ತಾವೇ ಸಿದ್ಧಪಡಿಸಿರುವ ನಕ್ಷೆಯನ್ನು ತೀರ್ಪುಗಾರರಿಗೆ ತೋರಿಸಿ ಮಾಹಿತಿ ವಿನಿಮಯ ಮಾಡುವ ಉತ್ಸಾಹ, ಇನ್ನೊಂದೆಡೆ ನಿರ್ಮಾಣ ರಂಗದ ತಜ್ಞರಿಂದ ಮಾಹಿತಿ ಪಡೆಯುವ ತವಕ.
ರಿಯಲ್ ಎಸ್ಟೇಟ್ ಕಂಪನಿಯು ಇದೇ ಪ್ರಥಮ ಬಾರಿಗೆ ಇಂತಹ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಲಾಗಿತ್ತು.
ರಾಜ್ಯದ ವಿವಿಧೆಡೆಯಿಂದ 100 ತಂಡಗಳು ಭಾಗವಹಿಸಿದ್ದವು. ಇದರಲ್ಲಿ 5 ತಂಡಗಳು ಸ್ಪರ್ಧೆ ಕೊನೆಯ ಸುತ್ತಿಗೆ ತಲುಪಲು ಯಶಸ್ವಿಯಾಗಿದ್ದುವು. ಅಂತಿಮವಾಗಿ ಬಿಎಂಎಸ್ ಕಾಲೇಜಿನ ವಿನಯ್ ಪ್ರಥಮ ಬಹುಮಾನ, ಆರ್ವಿ ಕಾಲೇಜಿನ ಆಕಾಶ್ ರಾಜು ಮತ್ತು ಆಕರ್ಷ ಶಾಮನೂರು ದ್ವಿತೀಯ ಬಹುಮಾನ ಪಡೆದರು. ಇವರಿಗೆ ಸೆಂಚುರಿ ರಿಯಲ್ ಎಸ್ಟೇಟ್ನ ಒಂದು ಪ್ರಾಜೆಕ್ಟ್ನಲ್ಲಿ ನಕ್ಷೆ ತಯಾರಿಸುವ ಅವಕಾಶ ಕೂಡ ದೊರೆಯಿತು.
ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸುವುದು ಒಂದು ಉದ್ದೇಶವಾದರೆ ಮತ್ತೊಂದೆಡೆ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳ ನಡುವೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಎಂದರು ಸೆಂಚುರಿಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪೈ. ವಾಸ್ತುಶಾಸ್ತ್ರ ತಜ್ಞ ಸಂಜಯ್ ಮೋಯೆ, ಪ್ರೇಮ್ ಚಂದಾವರ್ಕರ್, ಅರುಣ್ ಜೋಟ್ಬಳ್ಳಾ, ಇಟ್ಟಿ ಜಕಾರಿಯಾ ತೀರ್ಪುಗಾರರಾಗಿ ಭಾಗವಹಿಸಿದ್ದರು.
ವಿಜೇತರ ಮಾತು: ಬೆಂಗಳೂರು ಮೊದಲು ಗಾರ್ಡನ್ ಸಿಟಿ ಎಂದೇ ಖ್ಯಾತಿ ಪಡೆದಿತ್ತು. ಪಿಂಚಣಿದಾರರು ಮಾತ್ರ ಇರಲು ಇಷ್ಟ ಪಡುತ್ತಿದ್ದರು. ಆದರೆ ಇಂದು ಕಾಂಕ್ರಿಟ್ ನಾಡಾಗಿದೆ. ಹಿರಿಯ ನಾಗರಿಕರು ವಾಸ ಮಾಡಲು ಆಗದೆ ಇರುವಂತಹ ಅಸಹನೀಯ ವಾತಾವರಣ ಸೃಷ್ಟಿಯಾಗಿದೆ. ಅದಕ್ಕಾಗಿ ನಮ್ಮ ನಕ್ಷೆಯಲ್ಲಿ ಮನೆ ಜತೆ ಕಿರು ಉದ್ಯಾನಕ್ಕೂ ಅವಕಾಶ ಕಲ್ಪಿಸಿದ್ದೇವೆ. ಹಿರಿ ಜೀವಗಳ ಬದುಕು ಆನಂದದಿಂದ ತುಂಬಿರಲಿ; ಹಸಿರಾಗಿರಲಿ ಎಂಬುದೇ ಈ ವಿನ್ಯಾಸದ ಹಿಂದಿನ ಉದ್ದೇಶ’ ಎನ್ನುತ್ತಾರೆ ‘ಪ್ರಾಮಿಸಿಂಗ್ ಟ್ಯಾಲೆಂಟ್ ಪ್ರಶಸ್ತಿ’ ಪಡೆದ ಆಕಾಶ ಮತ್ತು ಆಕರ್ಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.