ಚಿತ್ರಮಂದಿರಗಳಲ್ಲಿ ಪ್ರತಿಚಿತ್ರ ಆರಂಭಕ್ಕೂ ಮುನ್ನ ‘ಈ ನಗರಕ್ಕೆ ಏನಾಗಿದೆ?’ ಎನ್ನುವ ಜಾಹೀರಾತಿನಲ್ಲಿ ಮುದ್ದು ಹುಡುಗಿ ಪಾತ್ರದಲ್ಲಿ ನಟಿಸಿದ್ದ ಸಿಮ್ರಾನ್ ನಾಟೇಕರ್ ಸದ್ಯ ‘ಕಾಜಲ್’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ್ದಾರೆ.
ಚಿತ್ರತಂಡ ಕರೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಿಮ್ರಾನ್ ಈ ಮೊದಲು ನಟಿಸಿದ ಚಿತ್ರಗಳ, ಧಾರಾವಾಹಿಗಳ ಕುರಿತು ನಗುತ್ತಲೇ ಹೇಳಿದರು. 8 ವರ್ಷವಿರುವಾಗ ಧೂಮಪಾನ ನಿಷೇಧ ಕುರಿತ ಜಾಹೀರಾತು ನಂತರ ಕಲರ್ಸ್ವಾಹಿನಿಯ ‘ಬಾಲಿಕಾ ವಧು’ ಧಾರವಾಹಿಯ ಮೂಲಕ ಸಿಮ್ರಾನ್ ಚಿರಪರಿಚಿತರು. 2013ರಲ್ಲಿ ತೆರೆಕಂಡ ‘ದ ಅವತೇಶ್’, ‘ಕೆದಿವಂತ್’ ಸಿನಿಮಾಗಳ ನಂತರ ‘ಬೆಸ್ಟ್ ಅಫ್ ಲಕ್ ಲಾಗೂ’ ಗುಜರಾತಿ ಸಿನಿಮಾದ ಮುಖ್ಯಪಾತ್ರವೊಂದರಲ್ಲಿ ಅಭಿನಯಿಸಿದ್ದರು.
‘ಕಾಜೋಲ್’ ಚಿತ್ರದಲ್ಲಿ ಅನಿವಾಸಿ ಭಾರತೀಯ (ಎನ್ಆರ್ಐ) ಪಾತ್ರದಲ್ಲಿ ನಟಿಸಿದ್ದೇನೆ. ಇದೊಂದು ಸುಮಧುರ ಪ್ರೇಮ ಕಥನ. ‘ಕಾಜಲ್’ ಸಂಬಂಧಿಕರ ಮನೆಗಾಗಿ ಹಳ್ಳಿಗೆ ಬಂದಾಗ ನಾಯಕನಟನೊಂದಿಗೆ ಪ್ರೇಮಾಂಕುರವಾಗುತ್ತದೆ. ಈ ಚಿತ್ರದಲ್ಲಿ ‘ಕರಿಯ–2’ ಚಿತ್ರದ ನಟ ಸಂತೋಷ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೂರು ಹಿಂದಿ ಚಿತ್ರಗಳನ್ನು ತಿರಸ್ಕರಿಸಿ ಕನ್ನಡ ಚಿತ್ರವನ್ನು ಒಪ್ಪಿಕೊಳ್ಳಲು ಈ ಪಾತ್ರವೇ ಕಾರಣ ಎನ್ನುವ ಸಿಮ್ರಾನ್, ದಕ್ಷಿಣ ಭಾರತೀಯ ಚಿತ್ರರಂಗದತ್ತ ಮುಖಮಾಡಲು ‘ಬಾಹುಬಲಿ’ ಸಿನಿಮಾ ಕಾರಣ ಎಂದು ನಗೆಬೀರುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.