ADVERTISEMENT

ಎಲ್.ಎನ್. ಮುಕುಂದರಾಜ್‌ ಅವರಿಗೆ ಅರವತ್ತು

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 19:45 IST
Last Updated 8 ಜನವರಿ 2020, 19:45 IST
ಎಲ್‌.ಎನ್‌. ಮುಕುಂದರಾಜ್‌
ಎಲ್‌.ಎನ್‌. ಮುಕುಂದರಾಜ್‌   
""

ಸಾಹಿತಿ, ನಾಟಕಕಾರ ಎಲ್.ಎನ್. ಮುಕುಂದರಾಜ್‌ ಅವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ಪರ್ಶ ಮಕ್ಕಳ ಕೇಂದ್ರ ‘ಎಲ್‌.ಎನ್‌. ಮುಕುಂದರಾಜ್‌ ಸಂಸ್ಕೃತಿ ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಿದೆ.

ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ಕ್ರಿಯಾಶೀಲ ಕೆಲಸಗಳನ್ನು ನೆನೆಯುವುದು, ಸನ್ಮಾನಿಸುವುದು ಈ ಉತ್ಸವದ ಉದ್ದೇಶವಾಗಿದೆ. ಜ.9ರಿಂದ ‌ಮೂರು ದಿನ ನಡೆಯುವ ಈ ಸಾಂಸ್ಕೃತಿಕ ಉತ್ಸವದಲ್ಲಿ ಎಲ್.ಎನ್. ಮುಕುಂದರಾಜ್‌ ಅವರು ರಚಿಸಿರುವ ನಾಟಕಗಳು, ನಿರ್ದೇಶಿದ ಸಿನಿಮಾ ‘ಕಾಡ ಹಾದಿಯ ಹೂಗಳು’ ಪ್ರದರ್ಶನಗೊಳ್ಳಲಿದೆ. ಅವರ ಹೊಸ ಕವನ ಸಂಕಲನ ‘ಉಪ್ಪೇರಿದ ದರ್ಪಣ’ ಬಿಡುಗಡೆಗೊಳ್ಳಲಿದೆ.

ಮುಕುಂದರಾಜ್ ಅವರು ದೇಶಕೋಶ ದಾಸವಾಳ, ನಿರಂಕುಶ, ವಿಲೋಮ ಚರಿತ್ರೆ ಎಂಬ ಕವನ ಸಂಕಲನ ಹೊರತಂದಿದ್ದಾರೆ. ವೈಶಂಪಾಯನತೀರ, ಇಗೋಪಂಜರ ಅಗೋಮುಗಿಲು, ದೇವರ ಆಟ, ಮುಳ್ಳಿನಕಿರೀಟ, ಕೆಂಪೇಗೌಡ ಕಥಾನಕ, ನೀಲವೇಣಿ, ಒಕ್ಕಲುಮುದ್ದಯ್ಯ, ಸಂಗ್ರಾಮಭಾರತ ಮತ್ತಿತರ ನಾಟಕಗಳನ್ನು ರಚಿಸಿದ್ದಾರೆ.

ADVERTISEMENT

ನಮ್ಮದಾರಿಯ ನೆರಳು, ಟಿ.ಆರ್. ಶಾಮಣ್ಣ, ಕೆ.ಎಚ್. ರಂಗನಾಥ್‌, ಪುಟಬಂಗಾರ, ಕಿ.ರಂ. ನಾಗರಾಜ ಜೀವನ ಚರಿತ್ರೆ, ವಿಯತ್ತಳವಿಹಾರಿ, ಬಸವನೆ ಮಾಮರ ಇವರ ಗದ್ಯಕೃತಿಗಳು, ನಾಥರಿದ್ದೂ ಅನಾಥೆ, ಜೀರೋ ಪಾಯಿಂಟ್, ಕ್ರೈಂ 27 ಅನುವಾದಿತ ಕೃತಿಗಳು, ತಾರುಣ್ಯ, ಸರ್ವಜ್ಞನ ವಚನಗಳು, ಸಾರೆಕೊಪ್ಪದ ಬಂಗಾರ, ಕಲಾತೀತ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಸಾಹಿತ್ಯ ಕ್ಷೇತ್ರದೊಂದಿಗೆ ಹೋರಾಟಗಳ ಮುಂಚೂಣಿಯಲ್ಲಿದ್ದು, ಶಿಕ್ಷಕ ಸಂಘಟನೆಗಳ ಮುಖಂಡರಾಗಿ ಹತ್ತು ಸಾವಿರ ಗುತ್ತಿಗೆ ಶಿಕ್ಷಕರ ಖಾಯಮಾತಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರತ್ಯೇಕತೆ, ವೃಂದ ಮತ್ತು ನೇಮಕಾತಿ ನಿಯಮಗಳ ಜಾರಿ, ಖಾಸಗಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಮರುನೇಮಕಾತಿ ಇತ್ಯಾದಿ ಸಂದರ್ಭದಲ್ಲಿ ಯಶಸ್ವಿಯಾಗಿ ಹೋರಾಟಗಳನ್ನು ಸಂಘಟಿಸಿದ್ದಾರೆ.

ಪಿಯು ನೌಕರರ ಪತ್ತಿನ ಸಹಕಾರ ಸಂಘ, ಪಿಯು ಒಕ್ಕೂಟ, ಕರ್ನಾಟಕ ಸಾಹಿತ್ಯ ಪರಿಷತ್ತು ಮುಂತಾದ ಸಂಘಟನೆಗಳ ಸ್ಥಾಪಕರಾಗಿ ದುಡಿದಿದ್ದಾರೆ. ಕಾವ್ಯಮಂಡಲದ ನಿರ್ದೇಶಕರಾಗಿದ್ದಾರೆ. ಪಿಯು ಕನ್ನಡಪಠ್ಯ ಸಮಿತಿಯ ಸಂಚಾಲಕರಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದಾರೆ.

ಎಲ್‌. ಎನ್‌. ಮುಕುಂದರಾವ್‌ ಸಂಸ್ಕೃತಿ ಉತ್ಸವ: ಕವಿತೆ, ಸಿನಿಮಾ, ನಾಟಕ, ಹೋರಾಟ ಬಗ್ಗೆ ಮಾತುಕತೆ. ಜ.9 ಸಂಜೆ 5ಕ್ಕೆ ಉದ್ಘಾಟನೆ– ಪ್ರದೀಪ್‌ ಎಲ್‌. ಮಾಲ್ಗುಡಿ, ಅಧ್ಯಕ್ಷತೆ– ಆರ್‌. ಪೂರ್ಣಿಮಾ, ಎಲ್‌.ಎನ್‌.ಎಂ ಮತ್ತು ಕವಿತೆಗಳ ಬಗ್ಗೆ ಹುಲಿಕುಂಟೆ ಮೂರ್ತಿ, ಅತಿಥಿ– ಎನ್‌.ಇ. ಅಹಮದ್‌, ಸಂಜೆ 7.30ಕ್ಕೆ ರಂಗೋತ್ರಿ ಮಕ್ಕಳ ಕೇಂದ್ರದ ಸಂಗ್ರಾಮ ಭಾರತ ನಾಟಕ ಪ್ರದರ್ಶನ. ಆಯೋಜನೆ– ಸ್ಪರ್ಶ ಮಕ್ಕಳ ಕೇಂದ್ರ ಬೆಂಗಳೂರು. ಸ್ಥಳ– ನಯನ ರಂಗಮಂದಿರ, ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ, ಜೆ.ಸಿ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.