ADVERTISEMENT

ಹೊಸ ವರ್ಷಕ್ಕೆ ನೃತ್ಯದ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ಹೊಸ ವರ್ಷಕ್ಕೆ ನೃತ್ಯದ ಮುನ್ನುಡಿ
ಹೊಸ ವರ್ಷಕ್ಕೆ ನೃತ್ಯದ ಮುನ್ನುಡಿ   

ನೃತ್ಯ ಕಲಾವಿದೆ ಅಂಜನಾ ಸುಧೀಂದ್ರ ಅವರು ತಮ್ಮ ತಾಯಿ ರಮಾ ಅವರ ಸ್ಮರಣಾರ್ಥ ಡಿಸೆಂಬರ್‌ 31ರ ನೃತ್ಯ ಮುನ್ನುಡಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಎ.ಡಿ.ಎ ರಂಗಮಂದಿರದಲ್ಲಿ ನಡೆದ ಈ ಕಾರ್ಯಕ್ರಮ, ನೃತ್ಯವನ್ನು ಆಸ್ವಾದಿಸುತ್ತಾ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಉದ್ದೇಶವನ್ನು ಹೊಂದಿತ್ತು.

ಹಿರಿಯ ನೃತ್ಯ ಗುರುಗಳಾದ ಗೀತಾ ಬಾಲಿ ಮತ್ತು ನರ್ಮದಾ ಅವರ ಬಳಿ ನೃತ್ಯಾಭ್ಯಾಸ ಮಾಡಿದ್ದ ಅಂಜನಾ ಅವರು ಪ್ರಸ್ತುತ ಡಾ.ಸೌಂದರ್ಯ ಶ್ರೀವತ್ಸ ಅವರಲ್ಲಿ ಕಲಿಕೆ ಮುಂದುವರಿಸಿದ್ದಾರೆ. ‘ನೃತ್ಯ ಮುನ್ನುಡಿ’ಗೆ ಸೌಂದರ್ಯ ಶ್ರೀವತ್ಸ ಅವರ ನಟುವಾಂಗ, ಡಿ.ಎಸ್. ಶ್ರೀವತ್ಸ ಅವರ ಗಾಯನ, ಸುಮಾರಾಣಿ ಅವರ ಸಿತಾರ್‌ ವಾದನವಿತ್ತು. ಕದಿಯೋತ್ಕಾಂತಿ ರಾಗ ಮತ್ತು ಆದಿತಾಳದಲ್ಲಿ ಪುಷ್ಪಾಂಜಲಿಯೊಂದಿಗೆ ಕಾರ್ಯಕ್ರಮ ಶುರು ಮಾಡಿದ ಅಂಜನಾ, ಗಣೇಶನ ಶ್ಲೋಕದ ನಂತರ ದೇವಿಸ್ತುತಿಗೆ ನರ್ತಿಸಿದರು. ಮಂಗಳಕ್ಕೆ ಬದಲು ರಾಷ್ಟ್ರಕವಿ ಕುವೆಂಪುರವರ ಒಂದು ಕವಿತೆಯನ್ನು ಸಂದರ್ಭೋಚಿತವಾಗಿ ಬಳಸಿಕೊಂಡರು. ‘ಮುಚ್ಚುಮರೆ ಇಲ್ಲದೆ ನಿನ್ನ ಮುಂದೆಲ್ಲವನೂ ಬಿಚ್ಚಿಡುವೆ ಓ ಗುರುವೇ ಅಂತರಾತ್ಮ’ ಎಂಬ ಸಾಲಿಗೆ ತನ್ಮಯತೆಯಿಂದ ಅಭಿನಯಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಕಾರ್ಯಕ್ರಮಕ್ಕೆ ನಾಗರಾಜ್‌ ಬೆಳಕಿನ ಸಂಯೋಜನೆ ಮಾಡಿದ್ದರು. ಹಿರಿಯ ಗುರುಗಳಾದ ವಸಂತಲಕ್ಷ್ಮಿ, ಭಾನುಮತಿ, ಶೀಲಾ ಚಂದ್ರಶೇಖರ್‌, ಜ್ಞಾನಶಂಕರ ಮಾಸಿಕದ ಸಂಪಾದಕ ಸುದರ್ಶನ ಭಾರತಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.