ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಪರ ಅವರ ಪತ್ನಿ ಮೀನಾಕ್ಷಿ ಬೈರೆಗೌಡ ಪ್ರತಿದಿನಬೆಳಿಗ್ಗೆ 6 ಗಂಟೆಗೆಪ್ರಚಾರಕ್ಕೆ ಹೊರ ಬಿದ್ದರೆ, ಮರಳಿ ಮನೆಗೆ ಸೇರುವುದು ರಾತ್ರಿ 10 ಗಂಟೆಗೆ. ವೃತ್ತಿಯಿಂದ ಸಾಫ್ಟವೇರ್ ಕಂಪನಿಯೊಂದರಲ್ಲಿ ನಿರ್ದೇಶಕಿಯಾಗಿರುವ ಅವರಿಗೆ ಚುನಾವಣಾ ಪ್ರಚಾರ ಹೊಸದಲ್ಲ. ಒಂದು ತಿಂಗಳು ರಜೆ ಹಾಕಿ ಪ್ರಚಾರ ನಡೆಸುತ್ತಿದ್ದಾರೆ.
ಕೃಷ್ಣ ಬೈರೇಗೌಡರ ತಾಯಿ ಸಾವಿತ್ರಿ ಬೈರೇಗೌಡ ಮತ್ತು ಸಹೋದರಿಯರು ಸಾಥ್ ನೀಡುತ್ತಿದ್ದಾರೆ.ಎಂತಹ ಕಾರ್ಯ ಒತ್ತಡ ಇದ್ದರೂ ಬೆಳಗಿನ ವಾಯುವಿಹಾರ, ಲಘು ವ್ಯಾಯಾಮ ತಪ್ಪಿಸಲ್ಲ.ಉದ್ಯಾನ ಮತ್ತು ಆಟದ ಮೈದಾನಗಳ ವಾಯು ವಿಹಾರಿಗಳ ಉಭಯ ಕುಶಲೋಪರಿಯೊಂದಿಗೆ ಅವರ ಮತಬೇಟೆ ಆರಂಭವಾಗುತ್ತದೆ. ಮನೆ, ಮನೆಗೆ ತೆರಳಿ ಮತ ಯಾಚಿಸುತ್ತಾರೆ. ಹತ್ತು ವರ್ಷದಿಂದ ಕ್ಷೇತ್ರದ ಜನರು ಮತ್ತು ಕಾರ್ಯಕರ್ತರ ಜತೆ ನಿಕಟ ಒಡನಾಟವಿರುವ ಕಾರಣ ಯಾರನ್ನೂ ಪರಿಚಯ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲ.
‘ಮೊದಲಿನಿಂದಲೂ ನಾನು ಮತ್ತು ಕೃಷ್ಣ ಬೈರೇಗೌಡರು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಬಿಸಿಲಿನಲ್ಲಿ ಓಡಾಡಿದರೂ ಸುಸ್ತಾಗುವುದಿಲ್ಲ’ ಎಂದು ತಮ್ಮಲವಲವಿಕೆಯ ಗುಟ್ಟು ಬಿಚ್ಚಿಟ್ಟರು.ಪ್ರಚಾರದ ಗಡಿಬಿಡಿ ನಡುವೆಯೇ ‘ಮೆಟ್ರೊ’ ಜತೆ ಮಾತಿಗಿಳಿದ ಮೀನಾಕ್ಷಿ,ಬೆಂಗಳೂರಿನ ಧ್ವನಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಕೃಷ್ಣ ಬೈರೇಗೌಡರಿಗಿದೆ ಎಂದರು.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶದ ದೊಡ್ಡ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತವೆ ಎನ್ನುವುದು ಅವರ ದೂರು.ಈ ಕ್ಷೇತ್ರಕ್ಕೆ ಮೆಟ್ರೊ ರೈಲು ಸಂಪರ್ಕ ಅಗತ್ಯವಿದೆ. ಪರಿಸರ ಮತ್ತು ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ ಎಂದು ತಮ್ಮ ಕನಸುಗಳನ್ನು ಬಿಚ್ಚಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.