ADVERTISEMENT

ಹೊರಮಾವು ಕಾಶೀಶ್ವರದಲ್ಲಿ ಶಿವರಾತ್ರಿ ಮಹೋತ್ಸವ

ಶಿವರಾಜು ಮೌರ್ಯ
Published 20 ಫೆಬ್ರುವರಿ 2020, 19:30 IST
Last Updated 20 ಫೆಬ್ರುವರಿ 2020, 19:30 IST
ಕಾಶೀಶ್ವರ
ಕಾಶೀಶ್ವರ   

ರಾಮಮೂರ್ತಿನಗರದ ಸಮೀಪದ ಹೊರಮಾವು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಕಾಶೀಶ್ವರ ದೇವಾಲಯದ ಆವರಣದಲ್ಲಿ ಭಕ್ತಾದಿಗಳಿಗಾಗಿ ಮಹಾ ಶಿವರಾತ್ರಿ ಮಹೋತ್ಸವ ಹಾಗೂ 51 ದೇವರುಗಳ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಗ್ರಾಮದ ಶ್ರೀಕಾಶೀಶ್ವರ ದೇವಾಲಯವು ಹೊಸ ಬಣ್ಣದೊಂದಿಗೆ ಕಂಗೊಳಿಸುತ್ತಿದ್ದು, ಊರಿನ ಗ್ರಾಮಸ್ಥರು ಈ ಹಬ್ಬವನ್ನು ವಿಶೇಷವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶ ಹಾಗೂ ರಸ್ತೆಗಳಿಗೆ ಬಣ್ಣಬಣ್ಣದ ವಿದ್ಯುತ್ ದ್ವೀಪಗಳಿಂದ ಅಲಂಕಾರ ಮಾಡಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ದೇವಸ್ಥಾನದ ಆವರಣದಲ್ಲಿ 51 ದೇವರುಗಳ ಪ್ರತಿಷ್ಠಾಪನೆ ಮಾಡಿ ಆಕರ್ಷಕವಾಗಿ ಕಾಣಲು ಆಭರಣಗಳಿಂದ ಅಲಂಕಾರ ಮಾಡಲಾಗುತ್ತದೆ.

ADVERTISEMENT

ಶುಕ್ರವಾರ ಬೆಳಿಗ್ಗೆ 6ಕ್ಕೆ ಪುಣ್ಯಾಹ ನವಗ್ರಹ ಪೂಜೆ, ನವಗ್ರಹ ಹೋಮ, ಗಣಪತಿ ಪೂಜೆ, ಗಣಪತಿ ಹೋಮ 21 ದೀಪಾರಾಧನೆ ಹಾಗೂ 21 ಕಳಶ ಪ್ರತಿಷ್ಠಾಪನೆ ಪುಷ್ಪಾರ್ಚನೆ ಮಾಡಲಾಗುತ್ತದೆ. 9ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯುತ್ತದೆ. ಸಂಜೆ 6ಕ್ಕೆ ಸಂಧ್ಯಾ ಕಾಲ ಪೂಜೆ, ತ್ರಿಶತಿ ಅರ್ಚನೆ, ಶ್ರೀಲಕ್ಷ್ಮಿ ಹೋಮ, ಶ್ರೀಮೃತ್ಯುಂಜಯ ಹೋಮ, ಶ್ರೀಮಹಾ ಸುದರ್ಶನ ಹೋಮ ಶ್ರೀಧನವಂತ್ರಿ ಹೋಮ ಏರ್ಪಡಿಸಲಾಗುತ್ತಿದೆ. ರಾತ್ರಿ 9.30 ಕ್ಕೆ ಮಹಾಮಂಗಳಾರತಿ ಪ್ರಸಾದ ನೈವೇದ್ಯ ಇರುತ್ತದೆ. ಅಂದು ಸಂಜೆ ರಾತ್ರಿ ಏಳು ಗಂಟೆಗೆ ಪಟಾಕಿ ಬಿರುಸು ಬಾಣಗಳ ವಿಶೇಷ ಆಕರ್ಷಣೆ ಇದೆ.

ಶನಿವಾರ ಬೆಳಿಗ್ಗೆ 4.35ಕ್ಕೆ ಸೂರ್ಯೋದಯ ಪೂಜೆ, ಶಿವರುದ್ರಾಭಿಷೇಕ, ಬಿಲ್ವಾರ್ಚಾನೆ, ಮಹಾ ನೈವೇದ್ಯ, 10.35ಕ್ಕೆ ಶ್ರೀಕಾಶೀಶ್ವರ ದೇವಾಲಯದಲ್ಲಿ ಪೂಜೆ ಮಾಡಿಸಿದ ಗಂಜಿಯನ್ನು ಸುಹಾಸಿನಿಯರು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಗ್ರಾಮದ ಮಾರಮ್ಮ ದೇವಿಗೆ ಅರ್ಪಿಸುತ್ತಾರೆ.

ದೇವಸ್ಥಾನ ಆವರಣದಲ್ಲಿ ಶ್ರಿಮೂಕಾಂಬಿಕಾದೇವಿ, ಮುತ್ಯಾಲಮ್ಮದೇವಿ, ರೇಣುಕಾ ಯಲ್ಲಮ್ಮದೇವಿ, ಕಾಳಿಕಾದೇವಿ, ಅಂಗಳಪರಮೇಶ್ವರಿ, ಮಹೇಶ್ವರಮ್ಮದೇವಿ, ಶಿವದುರ್ಗದೇವಿ, ಚಿಕ್ಕಮ್ಮದೇವಿ, ದುರ್ಗಾಪರಮೇಶ್ವರಿ, ಕನಕದುರ್ಗ, ಕಾಮಾಕ್ಷಿಯಮ್ಮದೇವಿ ವಿವಿಧ ದೇವತೆಗಳ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ದೇವರುಗಳ ದರ್ಶನ ಪಡೆಯಲು ಹೊರಮಾವು ಗ್ರಾಮದ ಸುತ್ತಮುತ್ತಲಿನ ಕಲ್ಕೆರೆ, ರಾಮಮೂರ್ತಿನಗರ, ಜಯಂತಿನಗರ, ಅಕ್ಷಯನಗರ, ಬಂಜಾರು ಬಡಾವಣೆ, ಕನಕನಗರ, ಚನ್ನಸಂದ್ರ, ಆಗರ, ಕಲ್ಯಾಣನಗರ, ಬಾಣಸವಾಡಿ ಹೆಣ್ಣೂರು,ಹೊಸಕೋಟೆ, ಮಾಲೂರು, ಕುಂಬಲಹಳ್ಳಿ, ತಿಗಳರಪೇಟೆ ಮುಂತಾದ ಕಡೆಗಳಿಂದ ಜನ ಸೇರುತ್ತಾರೆ. ಗ್ರಾಮಸ್ಥರು ದೇವಾಲಯದ ಆವರಣದಲ್ಲಿ ಮಜ್ಜಿಗೆ ಕೊಸಂಬರಿ, ಪಾನಕ, ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಿದ್ದಾರೆ‌.

ಶ್ರೀಕಾಶೀಶ್ವರ ದೇವಾಲಯದಲ್ಲಿ ಈ ವರ್ಷ 51 ದೇವರುಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಹಾ ಶಿವರಾತ್ರಿ ಹಬ್ಬವನ್ನು ವಿನೂತನವಾಗಿ ಅಚರಿಸುತ್ತೇವೆ ಎನ್ನುತ್ತಾರೆ ದೇವಸ್ಥಾನದ ಧರ್ಮದರ್ಶಿ ಪ್ರತಾಪ್.

ಮಂಡ್ಯ ಜಿಲ್ಲೆಯ 501 ತಮಟೆ ಕಲಾವಿದರಿಂದ ಜಾನಪದ ಝೆಂಕಾರ ಕಲರವ ಮತ್ತು ವೀರಭದ್ರನ ಕುಣಿತ ಹಾಗೂ ಕುಣಿತ ಇರಲಿದೆ. ಈ ಭಾಗದಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಕ್ರಮ ಇದಾಗಿದ್ದರಿಂದ ಗ್ರಾಮಸ್ಥರ ಸಹಕಾರದಿಂದ ಹಬ್ಬದ ಸಿದ್ಧತೆ ಮಾಡಲಾಗಿದೆ ಎನ್ನುತ್ತಾರೆ ದೇವಾಲಯದ ಪೋಷಕ ಗಂಜೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.