ವೈಜ್ಞಾನಿಕ ಮನೋಭಾವದ ಮೇಲೆ ದಾಳಿ ನಡೆಯುತ್ತಿದ್ದು,ವಿಜ್ಞಾನ ಸಂಸ್ಕೃತಿ ಅಪಾಯದಲ್ಲಿದೆ ಎಂದು ಕೋಲ್ಕತ್ತದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಶ್ಥೆಯ ಭೌತಿಕ ವಿಜ್ಞಾನದ ಪ್ರಾಧ್ಯಾಪಕ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಐಐಎಸ್ಇಆರ್) ಸಂಶೋಧಕ ಸೌಮಿತ್ರೊ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಬ್ರೇಕ್ಥ್ರೂ ಸೈನ್ಸ್ ಸೊಸೈಟಿ (ಬಿಎಸ್ಎಸ್) ಬೆಂಗಳೂರು ಘಟಕ ನಗರ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ವಿಜ್ಞಾನ ಸಂಸ್ಕೃತಿ’ ಕುರಿತು ಅವರು ಉಪನ್ಯಾಸ ನೀಡಿದರು. ವಿಜ್ಞಾನಕ್ಕೆ ಭಾರತದ ಕೊಡುಗೆ ಅನನ್ಯವಾದದ್ದು. ಆದರೆ, ಅದು ಬೆಳಕಿಗೆ ಬಾರದಿರುವುದು ವಿಷಾದನೀಯ ಎಂದರು.
ಪಾಶ್ಚಾತ್ಯರು ತಮ್ಮದೆಂದು ಪ್ರತಿಪಾದಿಸಿದ ಅನೇಕ ಸಂಶೋಧನೆಗಳನ್ನು ಪುರಾತನ ಕಾಲದಲ್ಲಿಯೇ ಭಾರತೀಯರು ಆವಿಷ್ಕಾರ ಮಾಡಿದ್ದರು ಎಂದು ಅಭಿಪ್ರಾಯಪಟ್ಟರು.
ವಿಜ್ಞಾನದ ಅಂತಿಮ ಗುರಿ ಸತ್ಯ ಪ್ರತಿಪಾದನೆ ಮಾತ್ರ. ವೈಜ್ಞಾನಿಕ ಚಿಂತನೆ ಮತ್ತು ಸಂಸ್ಕೃತಿಗೆ ಪೂರಕವಾದ ವಾತಾವರಣದಿಂದ ಮಾತ್ರ ವಿಜ್ಞಾನ ಬೆಳೆಯಲು ಸಾಧ್ಯ. ವಿಜ್ಞಾನದಿಂದ ಸಮಾಜದಲ್ಲಿ ಸತ್ಯ, ಶಾಂತಿ, ಸಾಮರಸ್ಯ, ಏಕತೆ ಸಾಧ್ಯ. ಮೌಢ್ಯಗಳು, ಹುಸಿ ವಿಜ್ಞಾನದಿಂದಮಾನವ ಕುಲ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಬಿಎಸ್ಎಸ್ ಅಧ್ಯಕ್ಷ ಜಿ. ಸತೀಶ್ ಕುಮಾರ್, ಕಾರ್ಯದರ್ಶಿ ರಂಜನಿ ಕೆ.ಎಸ್., ಜಂಟಿ ಕಾರ್ಯದರ್ಶಿ ದೀಪ್ತಿ ಬಿ. ಭಾಗವಹಿಸಿದ್ದರು. ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.