ಮಂಡ್ಯ: ‘ಮುಂಬೈನ ದಾದರ್ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಗೃಹದ ಮೇಲೆ ದಾಳಿ ನಡೆಸಿರುವವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್, ದ್ರಾವಿಡ ಚಳವಳಿ ಮುಖಂಡ ಅಭಿಗೌಡ ಹನಕೆರೆ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಮಾಜದಲ್ಲಿ ಜಾತೀಯತೆ, ತಾರತಮ್ಯ ಮೂಡಿಸುವ ಮನಸ್ಥಿತಿಗಳೇ ದಾಳಿಯ ಹಿಂದಿವೆ. ಟಿ.ವಿ ಮಾಧ್ಯಮ, ಪಠ್ಯಪುಸ್ತಕದ ಮೂಲಕ ಇಂದಿಗೂ ಅಸಮಾನತೆ ಹಾಗೂ ತಾರತಮ್ಯ ಬಿತ್ತುತ್ತಿರುವ ಫಲವೇ ಈ ದಾಳಿಯಾಗಿದೆ. ಅಂಬೇಡ್ಕರ್ ಅವರು ಯಾವುದೇ ಭಾಷೆ, ಜಾತಿಗೆ ಪ್ರಾಂತ್ಯಕ್ಕೆ ಸೀಮಿತವಲ್ಲ. ಅವರು ವಿಶ್ವಮಾನವರಾಗಿದ್ದು, ಬಡವರು, ದೀನ ದಲಿತರು, ಅಸಂಘಟಿತ ವಲಯದ ಕಾರ್ಮಿಕರ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದ್ದಾರೆ’ ಎಂದು ಹೇಳಿದರು.
ಗಂಗರಾಜು ಹನಕೆರೆ ಮಾತನಾಡಿ ‘ಇಲ್ಲಿಯವರೆಗೂ ದಾಳಿಯ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ ಇದು ಪೂರ್ವನಿಯೋಜಿತ ವೆನಿಸುತ್ತದೆ. ಅಲ್ಲದೆ ಇದನ್ನು ಖಂಡಿಸಿ ಪ್ರತಿಭಟಿಸುವುದನ್ನೂ ತಡೆಯಲು ರಾಜಗೃಹದ ಬಳಿ ನಿಷೇಧಾಜ್ಞೆ ಜಾರಿಗೊಳಿಸಿ ದಾಳಿಯನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದರು.
ಮುಖಂಡರಾದ ಕಿರಣ್ಕುಮಾರ್, ಸಿ.ಗುರಪ್ಪ, ಗಣಂಗೂರು ವೆಂಕಟೇಶ್, ಶಿವರುದ್ರಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.