ADVERTISEMENT

ಪೆನ್‌ಡ್ರೈವ್‌ ಪ್ರದರ್ಶನ: ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 11:22 IST
Last Updated 28 ನವೆಂಬರ್ 2019, 11:22 IST

ಕೆ.ಆರ್‌.ಪೇಟೆ: ‘ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಬಿಜೆಪಿ ಸೇರಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಂದ ₹ 40 ಕೋಟಿ ಸ್ವೀಕರಿಸಿದ್ದಾನೆ’ ಎಂದು ಆರೋಪ ಮಾಡಿದ ಜೆಡಿಎಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡ, ಆ ಕುರಿತ ಆಡಿಯೊ, ವಿಡಿಯೊ ಹಾಗೂ ಇತರ ದಾಖಲಾತಿಗಳಿವೆ ಎನ್ನಲಾದ ಪೆನ್‌ಡ್ರೈವ್‌ ಪ್ರದರ್ಶನ ಮಾಡಿದರು.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮುಖ್ಯಮಂತ್ರಿಗಳು ಅನರ್ಹ ಶಾಸಕರ ಜೊತೆ ನಡೆಸಿರುವ ಮಾತುಕತೆ, ಒಪ್ಪಂದದ ವಿವರ ಪೆನ್‌ಡ್ರೈವ್‌ನಲ್ಲಿದೆ. ಈ ಕುರಿತು ವಿಶೇಷ ತನಿಖೆ ನಡೆಸಬೇಕು. ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು. ತನಿಖೆ ಆರಂಭಗೊಂಡರೆ ಎಲ್ಲಾ ವಿವರ ನೀಡಲಾಗುವುದು. ಈ ಸಂದರ್ಭದಲ್ಲಿ ಆಡಿಯೊ, ವಿಡಿಯೊ ಬಿಡುಗಡೆ ಮಾಡುವುದಿಲ್ಲ’ ಎಂದರು.

ಆಣೆ, ಪ್ರಮಾಣ ಮಾಡಲಿ: ‘ರಾಜೀನಾಮೆ ನೀಡುವುದಕ್ಕಾಗಿ ಮೊದಲು ₹ 5 ಕೋಟಿಗೆ ಒಪ್ಪಂದವಾಗಿತ್ತು. ನಂತರ ನಾರಾಯಣಗೌಡ ಅದು ಸಾಕಾಗುವುದಿಲ್ಲ ಎಂದು ಬೇಡಿಕೆ ಇಟ್ಟ. ಮುಖ್ಯಮಂತ್ರಿಗಳು ₹ 40 ಕೋಟಿ ನೀಡಲು ಒಪ್ಪಿದರು. ಈ ಬಗ್ಗೆ ವಿಶೇಷ ತನಿಖೆ ನಡೆಸಲು ಮುಖ್ಯಮಂತ್ರಿಗಳೇ ಆದೇಶ ನೀಡಬೇಕು. ಒಪ್ಪಂದ ಮಾಡಿಕೊಂಡಿಲ್ಲ ಎನ್ನುವುದಾದರೆ ಯಡಿಯೂರಪ್ಪ, ನಾರಾಯಣಗೌಡ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಮನೆ ದೇವರ ಎದುರು ಆಣೆ, ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.