ಇಂಧೋರ್ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಕೊರೊನಾ ಸೊಂಕು ಹರಡುವ ಉದ್ದೇಶದಿಂದ ರಸ್ತೆಯಲ್ಲಿ ₹ 500, ₹ 200, ₹ 100ರ ನೋಟು ಎಸೆದಿದ್ದಾನೆ. ಆ ನೋಟುಗಳನ್ನು ಎತ್ತಿಕೊಂಡವರಿಗೆ ಸೋಂಕು ಹರಡಲಿ ಎಂಬುದು ಆತನ ಉದ್ದೇಶ. ಅದನ್ನು ನೋಡಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದ. ಹೀಗಾಗಿ ಪೊಲೀಸರು ಆ ನೋಟುಗಳನ್ನು ವಶಕ್ಕೆ ಪಡೆದು, ಸಾನಿಟೈಸ್ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೊ ಸಹ ವೈರಲ್ ಆಗಿದೆ.
ಮುಸ್ಲಿಂ ವ್ಯಕ್ತಿ ಈ ನೋಟು ಎಸೆದಿದ್ದಾನೆ ಎಂಬುದು ಸುಳ್ಳು ಮತ್ತು ಅದರಲ್ಲಿ ಕೊರೊನಾ ಸೋಂಕು ಇತ್ತು ಎಂಬುದು ಸುಳ್ಳು ಎಂಬುದನ್ನು ಇಂಧೋರ್ ಪೊಲೀಸರು ದೃಢಪಡಿಸಿದ್ದಾರೆ. ನೋಟು ಬಿದ್ದಿದ್ದ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಇಂಡೇನ್ ಗ್ಯಾಸ್ನ ಸಿಲಿಡಂರ್ ವಿತರಕ ನಾಂಗೇಂದ್ರ ಯಾದವ್ ಎಂಬುವವರ ಜೇಬಿನಿಂದ ಈ ದುಡ್ಡು ಬಿದ್ದಿದೆ. ಗ್ಯಾಸ್ ವಿತರಿಸಿ, ಪಡೆದ ಹಣವನ್ನು ಜೇಬಿಗೆ ಇರಿಸುವಾಗ ಆ ದುಡ್ಡು ಬಿದ್ದಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.