ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ಸಂಸದ ಭಗವಂತ್ ಮಾನ್ ಅವರು ಮದ್ಯದಂಗಡಿ ಮುಂದೆ ಕುಳಿತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಿಜೆಪಿ ನಾಯಕರಾದ ನವೀನ್ ಕುಮಾರ್ ಜಿಂದಾಲ್ ಮತ್ತು ಇಂಪ್ರೀತ್ ಸಿಂಗ್ ಭಕ್ಷಿ ಅವರು ಸೇರಿ ಹಲವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ತಮ್ಮ ನೆಚ್ಚಿನ ಜಾಗದಲ್ಲಿ ಕುಳಿತಿದ್ದಾರೆ ಎಂಬ ಅಡಿ ಬರಹವನ್ನು ಈ ಚಿತ್ರಕ್ಕೆ ನೀಡಲಾಗಿದೆ. ಕೇಜ್ರಿವಾಲ್ ಸರ್ಕಾರದ ಮದ್ಯ ನೀತಿಯನ್ನು ಮುಂದಿಟ್ಟುಕೊಂಡು ಅವರನ್ನು ಲೇವಡಿ ಮಾಡಲಾಗಿದೆ.
ಇದು ತಿರುಚಿರುವ ಚಿತ್ರ ಎಂದು ‘ಇಂಡಿಯಾ ಟುಡೆಫ್ಯಾಕ್ಟ್ಚೆಕ್’ ವರದಿ ಮಾಡಿದೆ. ಕೆಲ ದಿನಗಳ ಹಿಂದೆ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರು ಪಂಜಾನ್ನ ರೈತರ ಜೊತೆ ಸಾಸಿವೆ ಹೊಲದಲ್ಲಿ ಸಂವಾದ ನಡೆಸಿದ್ದರು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕಿರು ವಿಡಿಯೊವೊಂದನ್ನು ಎಎಪಿ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರ ಚಮಕೌರ್ ಸಾಹಿಬ್ ಕ್ಷೇತ್ರದಲ್ಲಿ ಸಂವಾದ ನಡೆಸಿದ್ದಾಗಿ ಟ್ವಿಟರ್ನಲ್ಲಿ ಮಾಹಿತಿ ನೀಡಲಾಗಿತ್ತು. ಆ ಚಿತ್ರವನ್ನು ತಿರುಚಿ, ಅವರಿಬ್ಬರೂ ಮದ್ಯದಂಗಡಿ ಮುಂದೆ ಇರುವಂತೆ ಬಿಂಬಿಸಲಾಗಿದೆ ಎಂದು ‘ಇಂಡಿಯಾ ಟುಡೆ’ ವರದಿಯಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.