‘ಹಳಿ ತಪ್ಪುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿ ಸರಿದಾರಿಗೆ ಬರಬೇಕಾದರೆ, ನೋಟುಗಳ ಮೇಲೆ ಗಣೇಶ ಹಾಗೂ ಲಕ್ಷ್ಮಿಯ ಚಿತ್ರಗಳನ್ನು ಮುದ್ರಿಸಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇದೇ 26ರಂದು ಪ್ರಧಾನಿಗೆ ಒತ್ತಾಯಿಸಿದ್ದರು. ಮುಸ್ಲಿಂ ದೇಶವಾಗಿದ್ದರೂ ಇಂಡೊನೇಷ್ಯಾದ ನೋಟುಗಳಲ್ಲಿ ಗಣೇಶನ ಚಿತ್ರ ಮುದ್ರಿಸಲಾಗಿದೆ ಎಂದು ಅವರು ಉದಾಹರಣೆ ನೀಡಿದ್ದರು. ಕೇಜ್ರಿವಾಲ್ ಅವರ ಮಾತುಗಳನ್ನು ಎಎಪಿಯ ಹಲವು ನಾಯಕರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಆದರೆ, ಗಣೇಶನ ಚಿತ್ರದ ನೋಟು ಅಲ್ಲಿ ಚಲಾವಣೆಯಲ್ಲಿಲ್ಲ.
ಇಂಡೊನೇಷ್ಯಾದ 20 ಸಾವಿರ ರೂಪಾಯಿ ಮುಖಬೆಲೆಯ ನೋಟಿನಲ್ಲಿ ಗಣೇಶನ ಚಿತ್ರವಿತ್ತು. ಆದರೆ, ಈ ಮುಖಬೆಲೆಯ ನೋಟುಗಳನ್ನು 2008ರಲ್ಲೇ ಅಲ್ಲಿನ ಸರ್ಕಾರವು ಚಲಾವಣೆಯಿಂದ ಹಿಂದಕ್ಕೆ ಪಡೆದಿದೆ. ಈ ನೋಟುಗಳನ್ನು ಜನರು ಬದಲಾಯಿಸಿಕೊಳ್ಳಲು 2018ರವರೆಗೂ ಸರ್ಕಾರ ಕಾಲಾವಕಾಶ ನೀಡಿತ್ತು ಎಂದು ಲಾಜಿಕಲ್ ಇಂಡಿಯನ್ ವೆಬ್ಸೈಟ್ ತಿಳಿಸಿದೆ. ಕೇಜ್ರಿವಾಲ್ ಹೇಳಿದಂತೆ ಇಂಡೊನೇಷ್ಯಾ ಬರೀ ಮುಸ್ಲಿಂ ದೇಶವಲ್ಲ. ಮುಸ್ಲಿಮರು ದೇಶದ ಬಹುಸಂಖ್ಯಾತರು. ಎಲ್ಲ ಧರ್ಮಗಳೂ ಸಮಾನ ಎಂಬುದಾಗಿ ಇಂಡೊನೇಷ್ಯಾ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಶೇ 1.7ರಷ್ಟು ಹಿಂದೂಗಳೂ ಇಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.