‘1966, ಗೋಪಾಷ್ಟಮಿ (ಗೋವುಗಳನ್ನು ಪೂಜಿಸುವ ಹಬ್ಬ) ತಿಥಿಯಂದು, 3–7 ಲಕ್ಷ ಸಾಧುಗಳು ಗೋಹತ್ಯೆ ನಿಲ್ಲಿಸುವ ಕಾಯಿದೆ ಜಾರಿ ಮಾಡಬೇಕೆಂದು ದೆಹಲಿಯಲ್ಲಿ ಹಸುಗಳೊಂದಿಗೆ ಪ್ರತಿಭಟಿಸುತ್ತಾರೆ. ಪ್ರಧಾನಿ ಇಂದಿರಾಗಾಂಧಿ ಗೋಲೀಬಾರ್ಗೆ ಆದೇಶಿಸುತ್ತಾಳೆ. ಸುಮಾರು 5,000 ಸಾಧು ಸಂತರನ್ನು ಮತ್ತು ಹಸುಗಳನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ...’ ಎಂಬ ಮಾಹಿತಿ ಇರುವ ಪೋಸ್ಟ್ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಅದರಲ್ಲಿ ನೀಡಿರುವ ಹಲವು ಮಾಹಿತಿಗಳು ತಪ್ಪಾಗಿವೆ.
1966ರ ನವೆಂಬರ್ 7ರಂದು ಗೋಹತ್ಯೆ ನಿಲ್ಲಿಸುವ ಕಾಯ್ದೆಯನ್ನು ಜಾರಿ ಮಾಡಬೇಕು ಎಂದು ಪ್ರತಿಭಟನೆ ನಡೆದಿತ್ತು. ಸರ್ವದಳೀಯ ಗೋರಕ್ಷಾ ಮಹಾಭಿಯಾನ ಸಮಿತಿಯು ಸತ್ಯಾಗ್ರಹವನ್ನು ಹಮ್ಮಿಕೊಂಡಿತ್ತು. ಇದಕ್ಕೆ ಜನಸಂಘದ ಬೆಂಬಲವೂ ದೊರೆತಿತ್ತು. ಈ ಸತ್ಯಾಗ್ರಹದಲ್ಲಿ ಸುಮಾರು ಒಂದು ಲಕ್ಷ ಸಾಧುಗಳು ಸೇರಿದ್ದರು. ಅಂದು ಕೆಲವು ಧಾರ್ಮಿಕ ಮುಖಂಡರು ಹಾಗೂ ಸಂಸದ ಸ್ವಾಮಿ ರಾಮೇಶ್ವರಾನಂದ ಅವರ ಭಾಷಣದಿಂದ ಉತ್ಸಾಹಿತರಾದ ಸತ್ಯಾಗ್ರಹಿಗಳು ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆ ವೇಳೆ ಪೊಲೀಸರು ಹಾಗೂ ಗುಂಪಿನ ನಡುವೆ ಸಂಘರ್ಷ ಏರ್ಪಟಿತ್ತು. ಈ ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಂದಿನ ಹಲವು ಪತ್ರಿಕೆಗಳು ವರದಿ ಮಾಡಿದ್ದವು. ಇದೇ ಸಂಖ್ಯೆಯನ್ನು ಸರ್ಕಾರವು ಸಂಸತ್ತಿಗೂ ನೀಡಿದೆ. ಆದ್ದರಿಂದ, ಸತ್ಯಾಗ್ರಹಕ್ಕೆ 3–7 ಲಕ್ಷ ಜನರು ಸೇರಿದ್ದರು ಮತ್ತು 5 ಸಾವಿರ ಸಾಧುಗಳ ಹತ್ಯೆ ನಡೆದಿತ್ತು ಎಂಬುದು ಸುಳ್ಳು ಎಂದು ‘ಇಂಡಿಯಾ ಟುಡೆ’ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.