ರಾಜಸ್ಥಾನ: ‘ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರ ಕೊಲೆ ಪ್ರಕರಣದಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ವಿಶೇಷ ನ್ಯಾಯಾಲಯವನ್ನು ರಚಿಸಬೇಕಿತ್ತು. ಹಾಗೆ ಮಾಡಿದ್ದಿದ್ದರೆ, ಕನ್ಹಯ್ಯಲಾಲ್ ಕೊಲೆಗಡುಕರಿಗೆ ಈ ಹೊತ್ತಿಗೆ ಗಲ್ಲು ಶಿಕ್ಷೆ ಜಾರಿಯಾಗಿರುತ್ತಿತ್ತು. ಕೊಲೆಗಡುಕರನ್ನು ಹಿಡಿಯಲೂ ಸರ್ಕಾರಕ್ಕೆ ಇಷ್ಟವಿರಲಿಲ್ಲ. ಕೇಂದ್ರದಿಂದ ಬಂದ ಎನ್ಐಎ ತಂಡ ಕೊಲೆಗಡುಕರನ್ನು ಬಂಧಿಸಿತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದರಲ್ಲಿ ಅಮಿತ್ ಶಾ ಅವರು ನೀಡುತ್ತಿರುವ ಹಲವು ವಿವರಗಳು ತಪ್ಪಾಗಿವೆ.
ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರ ಹತ್ಯೆ ನಡೆದಿದದ್ದು 2022ರ ಜೂನ್ 28ರಂದು. ಹತ್ಯೆ ನಡೆದ ನಾಲ್ಕು ತಾಸಿನ ಒಳಗೆ ರಾಜಸ್ಥಾನ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದರು. ಹೀಗಾಗಿ ಎನ್ಐಎ ಆ ಆರೋಪಿಗಳನ್ನು ಬಂಧಿಸಿತು ಎಂದು ಅಮಿತ್ ಶಾ ಅವರು ಹೇಳಿದ್ದು ಸುಳ್ಳು. ಜತೆಗೆ ಜೂನ್ 29ರಂದೇ ಎನ್ಐಎ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಎನ್ಐಎಯೇ 2022ರ ಡಿಸೆಂಬರ್ನಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಇಬ್ಬರು ಆರೋಪಿಗಳಿಗೆ ಜಾಮೀನೂನು ಸಿಕ್ಕಿದೆ. ‘ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರ ಕೊಲೆ ಪ್ರಕರಣದಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ವಿಶೇಷ ನ್ಯಾಯಾಲಯವನ್ನು ರಚಿಸಬೇಕಿತ್ತು. ಹಾಗೆ ಮಾಡಿದ್ದಿದ್ದರೆ, ಕನ್ಹಯ್ಯಲಾಲ್ ಕೊಲೆಗಡುಕರಿಗೆ ಈ ಹೊತ್ತಿಗೆ ಗಲ್ಲು ಶಿಕ್ಷೆ ಜಾರಿಯಾಗಿರುತ್ತಿತ್ತು’ ಎಂದು ಅಮಿತ್ ಶಾ ಹೇಳಿದ್ದು 2023ರ ಜೂನ್ 30ರಂದು. ಕೇಂದ್ರ ಸರ್ಕಾರದ ಎನ್ಐಎ ತನಿಖೆ ನಡೆಸುತ್ತಿದ್ದರೂ ಶಾ ಅವರು ರಾಜ್ಯ ಸರ್ಕಾರ ವಿಶೇಷ ನ್ಯಾಯಾಲಯ ರಚಿಸಬೇಕಿತ್ತು ಎಂದು ಜನರನ್ನು ಹಾದಿತಪ್ಪಿಸುವ ರೀತಿಯಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.