ಸಿಖ್ ಧರ್ಮೀಯರೊಬ್ಬರು ಮಸೀದಿಯಲ್ಲಿ ನಮಾಜ್ ಮಾಡುತ್ತಿರುವ ಚಿತ್ರವೊಂದು ಇತ್ತೀಚೆಗೆ ಸುದ್ದಿಯಲ್ಲಿದೆ. ‘ಈ ವ್ಯಕ್ತಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಮಸೀದಿಗೆ ಹೋಗುವ ಮುನ್ನ ಸಿಖ್ಖರ ಮುಂಡಾಸು ತೆಗೆಯಲು ಮರೆತಿದ್ದಾರೆ’ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಚರ್ಚೆ ನಡೆಸುತ್ತಿದ್ದಾರೆ. ‘ರೈತರ ಹೆಸರಿನಲ್ಲಿ ಕಮ್ಯುನಿಸ್ಟರು, ದೇಶದ್ರೋಹಿಗಳು, ಜಿಹಾದಿಗಳು ತಮ್ಮ ಕೊಳಕುಗಳನ್ನು ತೊಳೆದುಕೊಳ್ಳುತ್ತಿದ್ದಾರೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.
ಮಸೀದಿಯಲ್ಲಿ ಸಿಖ್ ವ್ಯಕ್ತಿ ನಮಾಜ್ ಮಾಡಿದ್ದು ನಿಜ ಎಂದು ಲಾಜಿಕಲ್ ಇಂಡಿಯನ್ ವೆಬ್ಸೈಟ್ ಖಚಿತಪಡಿಸಿದೆ. ಆದರೆ, ದೆಹಲಿಯಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಗೂ, ಈ ವ್ಯಕ್ತಿಗೂ ಸಂಬಂಧವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ. ಈ ಚಿತ್ರವು 2016ರ ಜನವರಿ 31ರಂದು ಶೇಕ್ ಮೊಹಮ್ಮದ್ ಅಸ್ಲಾಂ ಎಂಬುವರ ಫೇಸ್ಬುಕ್ ಪುಟದಲ್ಲಿ ಮೊದಲ ಬಾರಿಗೆ ಪ್ರಕಟವಾಗಿದೆ ಎಂಬುದು ರಿವರ್ಸ್ ಇಮೇಜ್ನಿಂದ ತಿಳಿದುಬಂದಿದೆ. ‘ಅಲ್ಲಾಹನು ಈ ಸುಂದರ ಧರ್ಮವನ್ನು ಪ್ರಪಂಚದಾದ್ಯಂತ ಹರಡಲಿ’ ಎಂದು ಅವರು ಬರೆದಿದ್ದಾರೆ. ಚಿತ್ರವನ್ನು Sikhawareness.com ಎಂಬ ವೆಬ್ಸೈಟ್ನಲ್ಲಿ ಸೆಪ್ಟೆಂಬರ್ 29, 2019 ರಂದು ಅಪ್ಲೋಡ್ ಮಾಡಲಾಗಿದೆ. ಇದರರ್ಥ ಹಾಲಿ ರೈತರ ಪ್ರತಿಭಟನೆಗೂ ಇದಕ್ಕೂ ಯಾವುದೇ ನಂಟಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.