ನವದೆಹಲಿ (ಪಿಟಿಐ): ಅಂಟಾರ್ಕ್ಟಿಕಾದ ಭಾರತೀಯ ಸಂಶೋಧನಾ ಕೇಂದ್ರದಲ್ಲಿ ಇಸ್ರೊ ಚಟುವಟಿಕೆಗಳು ಸ್ಥಗಿತವಾದ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ದೂರದ ಸ್ಥಳದಲ್ಲಿ ಇಂಧನ ಕೊರತೆ ಉಂಟಾಗಿರುವುದು ಮತ್ತು ತಂಡದ ನಾಯಕಿ ಜೊತೆ ಅವರ ಅಧೀನ ಸಹೋದ್ಯೋಗಿಗಳ ಘರ್ಷಣೆ ನಡೆದಿರುವುದು ಇಸ್ರೊ ಚಟುವಟಿಕೆಗಳ ಸ್ಥಗಿತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಈ ಕಹಿ ಘಟನೆ ಕುರಿತು ಭೂವಿಜ್ಞಾನ ಸಚಿವಾಲಯ ತನಿಖೆ ನಡೆಸಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜೈಪಾಲ್ ರೆಡ್ಡಿ ಶುಕ್ರವಾರ ಇಲ್ಲಿ ತಿಳಿಸಿದರು. ರಾಷ್ಟ್ರೀಯ ಭದ್ರತೆ ಮತ್ತು ಯೋಜನೆಯ ಯಶಸ್ಸಿನ ಹಿತದೃಷ್ಟಿಯಿಂದ ಈ ತನಿಖೆ ನಡೆಯಲಿದೆ ಎಂದು ಹೇಳಿದರು.
ಆದರೆ ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಶೈಲೇಶ್ ನಾಯಕ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಈ ಸಂಶೋಧನಾ ಕೇಂದ್ರ ‘ಭಾರ್ತಿ’ಯು ಇಸ್ರೊದ 20ಕ್ಕೂ ಹೆಚ್ಚಿನ ಉಪಗ್ರಹಗಳಿಗೆ ಅಂಕಿ–ಅಂಶಗಳನ್ನು ಒದಗಿಸುತ್ತಿದೆ ಮತ್ತು ದೇಶದ ವಿವಿಧ ವೈಜ್ಞಾನಿಕ ಸಂಸ್ಥೆಗಳ 17ಕ್ಕೂ ಅಧಿಕ ನೌಕರರನ್ನು ಹೊಂದಿದೆ. ಇದೇ ಅಕ್ಟೋಬರ್ನಲ್ಲಿ ಇಸ್ರೊ ಚಟುವಟಿಕೆ ಸ್ಥಗಿತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.