ತಿರುವನಂತಪುರ/ಕೊಚ್ಚಿ: ಎಲ್ಲ ಅಂತರ್ ಧರ್ಮೀಯ ವಿವಾಹಗಳನ್ನು ‘ಲವ್ ಜಿಹಾದ್’ ಅಥವಾ ‘ಘರ್ ವಾಪ್ಸಿ’ ಎಂದು ಪರಿಗಣಿಸಬಾರದು ಎಂದು ಕೇರಳ ಹೈಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.
ಬಲವಂತವಾಗಿ ಧಾರ್ಮಿಕ ಮತಾಂತರ ಅಥವಾ ಮರು ಮತಾಂತರ ಮಾಡುವ ಕೇಂದ್ರಗಳನ್ನು ಮುಚ್ಚಲೂ ಅದು ಕರೆ ನೀಡಿದೆ.
ಕಣ್ಣೂರು ನಿವಾಸಿಯಾಗಿರುವ ಶ್ರುತಿ ಮೇಲೇಡೆತ್ತ್ ಅವರು, ಮುಸ್ಲಿಂ ಯುವಕ, ತಮ್ಮ ಸಹಪಾಠಿ ಅನೀಸ್ ಹಮೀದ್ ಎಂಬುವವರನ್ನು ಮದುವೆಯಾಗಿ ಇಸ್ಲಾಂಗೆ ಮತಾಂತರಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿ. ಚಿದಂಬರೀಷ್ ಮತ್ತು ಸತೀಶ್ ನೈನನ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಮದುವೆಯ ಸಿಂಧುತ್ವ ಪ್ರಶ್ನಿಸಿ ಶ್ರುತಿ ಕುಟುಂಬ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಅನೀಸ್ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಅನೀಸ್ ಅವರ ಅರ್ಜಿಯನ್ನು ಪರಿಗಣಿಸಿದ ನ್ಯಾಯಪೀಠ ಅವರಿಬ್ಬರ ಮದುವೆಯನ್ನು ಮಾನ್ಯ ಮಾಡಿದೆ. ಪೋಷಕರು ಅಥವಾ ಇತರರ ಮಧ್ಯಪ್ರವೇಶ ಇಲ್ಲದೇ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ದಂಪತಿಗೆ ಬಿಟ್ಟದ್ದು ಎಂದು ನ್ಯಾಯಪೀಠ ಹೇಳಿದೆ.
‘ಲವ್ ಜಿಹಾದ್’ ಎಂಬ ಪದವನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿರುವ ಬಗ್ಗೆಯೂ ನ್ಯಾಯಪೀಠ ಕಳೆದ ವಾರ ಇದೇ ಅರ್ಜಿಯ ವಿಚಾರಣೆಯ ವೇಳೆ ಇಂತಹದ್ದೇ ಅಭಿಪ್ರಾಯ ವ್ಯಕ್ತಪಡಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.