ADVERTISEMENT

ಅಂಬೇಡ್ಕರರನ್ನು ಬೇರೆ ಯಾವ ಸರ್ಕಾರವೂ ನಮ್ಮಷ್ಟು ಗೌರವಿಸಿಲ್ಲ: ಪ್ರಧಾನಿ ಮೋದಿ

ಏಜೆನ್ಸೀಸ್
Published 4 ಏಪ್ರಿಲ್ 2018, 11:51 IST
Last Updated 4 ಏಪ್ರಿಲ್ 2018, 11:51 IST
ಅಂಬೇಡ್ಕರರನ್ನು ಬೇರೆ ಯಾವ ಸರ್ಕಾರವೂ ನಮ್ಮಷ್ಟು ಗೌರವಿಸಿಲ್ಲ: ಪ್ರಧಾನಿ ಮೋದಿ
ಅಂಬೇಡ್ಕರರನ್ನು ಬೇರೆ ಯಾವ ಸರ್ಕಾರವೂ ನಮ್ಮಷ್ಟು ಗೌರವಿಸಿಲ್ಲ: ಪ್ರಧಾನಿ ಮೋದಿ   

ನವದೆಹಲಿ: ಅಂಬೇಡ್ಕರ್‌ ಅವರ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ಧೋರಣೆಯನ್ನು ಕುರಿತು ಟೀಕಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ‘ದಲಿತ ನಾಯಕನನ್ನು ನಮ್ಮ ಸರ್ಕಾರ ಗೌರವಿಸಿದಷ್ಟು ಬೇರೆ ಯಾವುದೇ ಸರ್ಕಾರ ಗೌರವಿಸಿಲ್ಲ’ ಎಂದು ಹೇಳಿದ್ದಾರೆ.

ಅಂಬೇಡ್ಕರ್‌ ಅವರ ನೆನಪಿನಲ್ಲಿ ರೂಪಿಸಲಾದ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ನಮ್ಮ ಸರ್ಕಾರ ಅಂಬೇಡ್ಕರ್‌ ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡಿದೆ ಎಂದಿದ್ದಾರೆ.

ADVERTISEMENT

ಸಂಸದರಿಗೆ ವಸತಿ ಸೌಕರ್ಯ ಕಲ್ಪಿಸುವ ಸಲುವಾಗಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ‘ಅಂಬೇಡ್ಕರ್‌ ಅವರು ಕೊನೆಯುಸಿರೆಳೆದ ಅಲಿಪುರ ರಸ್ತೆಯಲ್ಲಿರುವ ಮನೆಯನ್ನು ಅವರು ಹುಟ್ಟಿದ ದಿನದಂದು (ಏಪ್ರಿಲ್ 13) ದೇಶಕ್ಕೆ ಸಮರ್ಪಿಸಲಾಗುವುದು’ ಎಂದೂ ಹೇಳಿದರು.

‘ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್‌ ಹೆಸರನ್ನು ಎಳೆದು ತರುತ್ತಿರುವುದು ಶೋಚನೀಯ’ ಎಂದ ಪ್ರಧಾನಿ ‘ಅಟಲ್‌ ಬಿಹಾರಿ ವಾಜಪೇಯಿ ಅವರು ಆರಂಭಿಸಿದ ಅಂಬೇಡ್ಕರ್‌ ಅಂತರರಾಷ್ಟ್ರೀಯ ಕೇಂದ್ರವನ್ನು ನಮ್ಮ ಸರ್ಕಾರ ಪೂರ್ಣಗೊಳಿಸಿದೆ. ಹಿಂದಿನ ಯುಪಿಎ ಸರ್ಕಾರ ಈ ಯೋಜನೆಯನ್ನು ಪೂರ್ಣಗೊಳಿಸದೆ ಅದರ ಹೆಸರಿನಲ್ಲಿ ವರ್ಷಗಟ್ಟಲೆ ಕಾಲಹರಣ ಮಾಡಿದೆ’ ಎಂದು ದೂರಿದರು.

ಪರಿಶಿಷ್ಟ ಜಾತಿ, ಪಂಗಡಗಳ ಜನರ ಮೇಲಿನ ದೌರ್ಜನ್ಯದ ದೂರು ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸುವಂತಿಲ್ಲ ಎಂದು ಮಾರ್ಚ್‌ 20ರಂದು ಸುಪ್ರೀಂ ಕೊರ್ಟ್‌ ತೀರ್ಪು ನೀಡಿತ್ತು. ದುರ್ಬಳಕೆ ತಡೆ ಉದ್ದೇಶದಿಂದ ನೀಡಲಾಗಿದ್ದ ಈ ತೀರ್ಪನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.