ADVERTISEMENT

ಅಣ್ಣಾ ಪ್ರಚಾರ ಅನಿಶ್ಚಿತ?

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST
ಅಣ್ಣಾ ಪ್ರಚಾರ ಅನಿಶ್ಚಿತ?
ಅಣ್ಣಾ ಪ್ರಚಾರ ಅನಿಶ್ಚಿತ?   

ಪುಣೆ (ಐಎಎನ್‌ಎಸ್): ಎದೆ ನೋವು ಮತ್ತು ಉಸಿರಾಟದ ತೊಂದರೆಯಿಂದ ಇಲ್ಲಿನ ಸಂಚೇತಿ ಆಸ್ಪತ್ರೆಗೆ ದಾಖಲಾಗಿರುವ ಅಣ್ಣಾ ಹಜಾರೆ ಅವರಿಗೆ ಕನಿಷ್ಠ ಒಂದು ತಿಂಗಳ ವರೆಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ. ಇದರಿಂದಾಗಿ ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಣ್ಣಾ ತಂಡ ನಡೆಸಲು ಉದ್ದೇಶಿಸಿದ್ದ ಪ್ರಚಾರ ಅಭಿಯಾನದ ಬಗ್ಗೆ ಅನಿಶ್ಚಿತತೆ ಉಂಟಾಗಿದೆ.

`ಒಂದು ವಾರದವರೆಗೆ ಸಂಪೂರ್ಣವಾಗಿ ಹಾಸಿಗೆ ಮೇಲೆ ವಿಶ್ರಾಂತಿ ಪಡೆಯಬೇಕು. ಅದಾದ ನಂತರ ಅವರ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಲಾಗುವುದು. ಒಂದು ತಿಂಗಳವರೆಗೂ ಎಲ್ಲಿಗೂ ಓಡಾಡದಂತೆ ಸಲಹೆ ನೀಡಿದ್ದೇವೆ~ ಎಂದು ಅಣ್ಣಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಮಾಲೀಕ ಹಾಗೂ ಶಸ್ತ್ರಚಿಕಿತ್ಸಕ ಪರಾಗ್ ಸಂಚೇತಿ ತಿಳಿಸಿದ್ದಾರೆ.

`ಅಣ್ಣಾ ಅವರ ಚಿಕಿತ್ಸೆಗಾಗಿ ತಗಲುವ ಸಂಪೂರ್ಣ ವೆಚ್ಚವನ್ನು ಆಸ್ಪತ್ರೆ ನೋಡಿಕೊಳ್ಳಲಿದ್ದು, ಇದು ಕೂಡ ಒಂದು ರೀತಿಯಿಂದ ಸಮಾಜ ಸೇವೆ~ ಎಂದು ಅವರು ಹೇಳಿದ್ದಾರೆ.

`ವಿಧಾನಸಭಾ ಚುನಾವಣಾ ಪ್ರಚಾರ ಅಭಿಯಾನ ಸಂಪೂರ್ಣವಾಗಿ ಅಣ್ಣಾ ಅವರ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿದೆ. ಅಣ್ಣಾ ಅವರ ಆರೋಗ್ಯ ಸ್ಥಿತಿ ಮತ್ತು ವೈದ್ಯರು ನೀಡುವ ಸಲಹೆ ಮೇರೆಗೆ ಸೂಕ್ತ ನಿರ್ಧಾರಕ್ಕೆ ಬರಲಾಗುವುದು~ ಎಂದು ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

`ಅಣ್ಣಾ ಅವರ ಎದೆ ನೋವು ಕಡಿಮೆಯಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ, ಕೋರ್ ಕಮಿಟಿ ಸಭೆ ಕುರಿತು ಶೀಘ್ರವೇ ತೀರ್ಮಾನಕ್ಕೆ ಬರಲಾಗುವುದು~ ಎಂದು ಹೇಳಿದ್ದಾರೆ.

ಅಣ್ಣಾ ಅವರ ಆರೋಗ್ಯ ನಮ್ಮ ತಂಡ ಮತ್ತು ಇಡೀ ದೇಶಕ್ಕೆ ಎಲ್ಲಕ್ಕಿಂತ ಪ್ರಧಾನವಾದದ್ದು~ ಎಂದು ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.