ADVERTISEMENT

ಅಣ್ಣಾ ಸಿಡಿ ಸಂದೇಶದೊಂದಿಗೆ ಹಿಸ್ಸಾರ್ ತಲುಪಿದ ತಂಡ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:40 IST
Last Updated 8 ಅಕ್ಟೋಬರ್ 2011, 10:40 IST

ಹಿಸ್ಸಾರ್ (ಹರ್ಯಾಣ) (ಪಿಟಿಐ): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ದ್ವನಿ ಮುದ್ರಿತ ಸಂದೇಶವುಳ್ಳ ಸಿಡಿಗಳೊಂದಿಗೆ ಸಜ್ಜಾಗಿ ಇಲ್ಲಿಗೆ ಆಗಮಿಸಿರುವ ಅವರ ತಂಡದ ಸದಸ್ಯರು ಇಲ್ಲಿ ಮುಂಬರುವ ಲೋಕಸಭಾ ಉಪ ಚುನಾವಣೆಗೆ ಮುಂಚಿತವಾಗಿಯೇ ಭ್ರಷ್ಟಾಚಾರ ವಿರೋಧಿ ಮತ್ತು ಕಾಂಗ್ರೆಸ್ ವಿರೋಧಿ ಪ್ರಚಾರವನ್ನು ಶನಿವಾರ ಆರಂಭಿಸಲಿದ್ದಾರೆ.

ಅಣ್ಣಾ ತಂಡದ ಸದಸ್ಯರಾದ ಮಾಹಿತಿ ಹಕ್ಕು ಕಾಯ್ದೆ (ಆರ್ ಟಿ ಐ) ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಮತ್ತು ಹಜಾರೆ ಅವರ ನಿಕಟವರ್ತಿ ಮನಿಶ್ ಸಿಸೋಡಿಯ ಅವರು ಹಿಸ್ಸಾರ್ ಲೋಕಸಭಾ ಕ್ಷೇತ್ರದ ಪ್ರದೇಶಗಳಲ್ಲಿ ಸಣ್ಣ ಸಣ್ಣ ಸಭೆಗಳನ್ನು ನಡೆಸುವ ಮೂಲಕ ಅಭಿಯಾನ ಆರಂಭಿಸುವರು.

ಹಿಸ್ಸಾರ್ ಲೋಕಸಭಾ ಸ್ಥಾನಕ್ಕೆ ಅಕ್ಟೋಬರ್ 13ರಂದು ಉಪಚುನಾವಣೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಭಜನ್ ಲಾಲ್  ಜೂನ್ ತಿಂಗಳಲ್ಲಿ ನಿಧನರಾದ ಪರಿಣಾಮವಾಗಿ ಈ ಸ್ಥಾನ ತೆರವಾಗಿದೆ
ಕೇಜ್ರಿವಾಲ್ ಅವರು ಕಾಂಗ್ರೆಸ್ ವಿರೋಧಿ ಅಭಿಯಾನವನ್ನು ಕ್ಷೇತ್ರದ ನರ್ನೌಂದ್ ಪ್ರದೇಶದಿಂದ ಆರಂಭಿಸುವರು.

ಹಿಂದಿನ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಮತ್ತು ವಕೀಲ ಪ್ರಶಾಂತ ಭೂಷಣ್ ಅವರು ಕೂಡಾ ಕೆಲವೇ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆ ಇದೆ.

ಹಜಾರೆ ಅವರು ಪ್ರಚಾರಕ್ಕಾಗಿ ಬರುವ ಸಾಧ್ಯತೆಗಳಿಲ್ಲ. ಆದರೆ ಅವರ ಸಂಘಟನೆಯ ಸದಸ್ಯರು ಹಜಾರೆ ಅವರು ಧ್ವನಿಮುದ್ರಿತ ಸಂದೇಶವನ್ನು ಜನರಿಗೆ ತಲುಪಿಸಿ ಕೇಳಿಸುವರು ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.