ಚೆನ್ನೈ: ಸೇಲಂನ ಅರುಳ್ಮಿಗು ಸುಗವಣೇಶ್ವರರ್ ದೇವಾಲಯದ ರಾಜೇಶ್ವರಿ ಆನೆಯ ಕಾಲು ನೋವು ಗುಣಪಡಿಸಲು ಸಾಧ್ಯವಿಲ್ಲ. ಅದು ನೋವು ಸಹಿಸಿಕೊಂಡೇ ಬದುಕುವುದು ಕ್ರೂರ ಎಂದು ಪಶುವೈದ್ಯರು ವರದಿ ನೀಡಿದರೆ, ಅದನ್ನು ಆಧರಿಸಿ ದಯಾಮರಣಕ್ಕೆ ಅವಕಾಶ ಕಲ್ಪಿಸಬಹುದು ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ಹೇಳಿದೆ.
ಇಲ್ಲಿನ ಭಾರತೀಯ ಪ್ರಾಣಿ ಹಕ್ಕುಗಳು ಮತ್ತು ಶಿಕ್ಷಣ ಕೇಂದ್ರದ (ಐಸಿಎಆರ್ಎ) ಮುರಳೀಧರನ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಅವರಿದ್ದ ಪೀಠ ಈ ಆದೇಶ ನೀಡಿದೆ.
‘ರಾಜೇಶ್ವರಿಯನ್ನು 10 ವರ್ಷಗಳ ಹಿಂದೆ ಟ್ರಕ್ವೊಂದರಿಂದ ಇಳಿಸುವಾಗ ಅದರ ಒಂದು ಕಾಲು ಮುರಿದಿದೆ. ಆಗಿನಿಂದಲೂ ಅದು ಮೂರು ಕಾಲುಗಳ ಮೇಲೆ ಮಾತ್ರ ನಿಲ್ಲುತ್ತಿದ್ದು ಸಂಧಿವಾತದಿಂದ ಬಳಲುತ್ತಿದೆ. ಇದನ್ನು ಗುಣಪಡಿಸಲು ಸಾಧ್ಯವಿಲ್ಲ. ಅಲ್ಲದೆ, 45 ವರ್ಷದ ಈ ಆನೆ, ಕೆಲ ತಿಂಗಳುಗಳಿಂದ ಮಲಗಿಯೇ ಇರುವುದರಿಂದ ಅದಕ್ಕೆ ಹುಣ್ಣುಗಳು (ಬೆಡ್ ಸೋರ್) ಆಗಿವೆ. ಇದರಿಂದ ಆನೆಗೆ ನೋವು ಸಹಿಸಲು ಆಗುವುದಿಲ್ಲ’ ಎಂದು ಮುರಳೀಧರನ್ ಅರ್ಜಿಯಲ್ಲಿ ತಿಳಿಸಿದ್ದರು.
‘ಕೋರ್ಟ್ ತೀರ್ಪು ನಿರಾಳ ಉಂಟು ಮಾಡಿದೆ. ರಾಜೇಶ್ವರಿ ಇನ್ನು ಮುಂದೆ ನೋವು ಅನುಭವಿಸುತ್ತ ಬದುಕುವ ಪರಿಸ್ಥಿತಿ ಇರುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.