ADVERTISEMENT

ಅಸಹಿಷ್ಣುತೆಯಿಂದ ದೇಶದ ಅಸ್ತಿತ್ವವೇ ದುರ್ಬಲ: ಪ್ರಣವ್‌

ಪ್ರಣವ್‌ ದೇಶಪ್ರೇಮದ ವ್ಯಾಖ್ಯಾನ

ಪಿಟಿಐ
Published 7 ಜೂನ್ 2018, 19:48 IST
Last Updated 7 ಜೂನ್ 2018, 19:48 IST
ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಣವ್‌ ಮುಖರ್ಜಿ ಅವರಿಗೆ ಮೋಹನ್‌ ಭಾಗವತ್‌ ಪುಷ್ಪಗುಚ್ಛ ನೀಡಿ ಗೌರವಿಸಿದರು –ಪಿಟಿಐ ಚಿತ್ರ
ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಣವ್‌ ಮುಖರ್ಜಿ ಅವರಿಗೆ ಮೋಹನ್‌ ಭಾಗವತ್‌ ಪುಷ್ಪಗುಚ್ಛ ನೀಡಿ ಗೌರವಿಸಿದರು –ಪಿಟಿಐ ಚಿತ್ರ   

ನಾಗ್ಪುರ: ಧರ್ಮ, ಸಿದ್ಧಾಂತ ಅಥವಾ ಅಸಹಿಷ್ಣುತೆ ಮೂಲಕ ಭಾರತವನ್ನು ವ್ಯಾಖ್ಯಾನಿಸುವ ಯಾವುದೇ ಪ್ರಯತ್ನ ದೇಶದ ಅಸ್ತಿತ್ವವನ್ನೇ ದುರ್ಬಲಗೊಳಿಸುತ್ತದೆ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಎಚ್ಚರಿಕೆ ನೀಡಿದ್ದಾರೆ.

ಸುಮಾರು 50 ವರ್ಷ ಕಾಲ ಜತೆಗಿದ್ದ ಕಾಂಗ್ರೆಸ್‌ ಪಕ್ಷ, ಮಗಳು ಶರ್ಮಿಷ್ಠಾ ಮತ್ತು ಇತರರ ತೀವ್ರ ಟೀಕೆಯ ನಡುವೆಯೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತರ ಮೂರು ವರ್ಷದ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಣವ್‌ ಗುರುವಾರ ಭಾಗವಹಿಸಿದರು.

ವಿಶ್ವವಾದ, ಸಮನ್ವಯ ಮತ್ತು ಸಹಬಾಳ್ವೆಯಿಂದಲೇ  ಭಾರತದ ರಾಷ್ಟ್ರೀಯತೆ ರೂಪುಗೊಂಡಿದೆ. ಹಾಗಾಗಿ ಅಸಹಿಷ್ಣುತೆ ರಾಷ್ಟ್ರೀಯತೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ವಿವರಿಸಿದರು.

ADVERTISEMENT

‘ದೇಶ, ದೇಶೀಯತೆ ಮತ್ತು ದೇಶಪ್ರೇಮದ ಬಗ್ಗೆ ನನ್ನ ಗ್ರಹಿಕೆಯನ್ನು ಹಂಚಿಕೊಳ್ಳುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಮ್ಮ ಸಾರ್ವಜನಿಕ ಸಂವಾದದಿಂದ ಎಲ್ಲ ರೀತಿಯ ಭಯ ಮತ್ತು ಹಿಂಸೆಯನ್ನು ತೊಡೆದು ಹಾಕಬೇಕು’ ಎಂದು ಅವರು ಹೇಳಿದರು.

ಯಾರೂ ಅನ್ಯರಲ್ಲ: ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪ್ರಣವ್‌ ಅವರ ಭಾಗವಹಿಸುವಿಕೆ ಬಗ್ಗೆ ನಡೆದ ಚರ್ಚೆ ಅರ್ಥಹೀನ. ಯಾಕೆಂದರೆ ಆರ್‌ಎಸ್‌ಎಸ್‌ಗೆ ಯಾರೂ ಹೊರಗಿನವರಲ್ಲ ಎಂದು ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

ಹೆಡಗೇವಾರ್‌ಗೆ ಮೆಚ್ಚುಗೆ
ಆರ್‌ಎಸ್‌ಎಸ್‌ನ ಸ್ಥಾಪಕ ಕೇಶವ ಬಲಿರಾಮ್‌ ಹೆಡಗೇವಾರ್‌ ಅವರ ಹುಟ್ಟಿದ ಸ್ಥಳಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಜತೆಗೆ ‍ಪ್ರಣವ್‌ ಭೇಟಿ ನೀಡಿದರು.

ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ‘ಭಾರತ ಮಾತೆಯ ಶ್ರೇಷ್ಠ ಪುತ್ರನಿಗೆ ಗೌರವ ಮತ್ತು ನಮನ ಸಲ್ಲಿಸುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಪ್ರಣವ್‌ ಬರೆದರು.

**

ಸಹಿಷ್ಣುತೆಯಿಂದಲೇ ನಾವು ಶಕ್ತಿ ಪಡೆದುಕೊಳ್ಳುತ್ತೇವೆ, ಬಹುತ್ವವನ್ನು ಗೌರವಿಸುತ್ತೇವೆ. ವೈವಿಧ್ಯವನ್ನು ಸಂಭ್ರಮಿಸುತ್ತೇವೆ
– ಪ್ರಣವ್‌ ಮುಖರ್ಜಿ, ಮಾಜಿ ರಾಷ್ಟ್ರಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.