ADVERTISEMENT

ಅಸ್ಸಾಂ: ಕಾಮಾಕ್ಯ ದೇಗುಲ ಬಳಿ ರುಂಡ ಪತ್ತೆ, ನರಬಲಿ ಶಂಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 9:30 IST
Last Updated 2 ಮಾರ್ಚ್ 2012, 9:30 IST

ಗುವಾಹತಿ (ಐಎಎನ್ಎಸ್): ಪುರಾತನ ಕಾಮಾಕ್ಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಮನುಷ್ಯ ರುಂಡವೊಂದು ಶುಕ್ರವಾರ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಿದೆ. ಇದು ನರಬಲಿ ಪ್ರಕರಣ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ಲಾಸ್ಟಿಕ್ ಚೀಲವೊಂದರಲ್ಲಿ ಮನುಷ್ಯರುಂಡ ಪತ್ತೆಯಾಗಿದ್ದು ಜೊತೆಗೇ ಮಂತ್ರಗಳನ್ನು ಬರೆಯಲಾಗಿದ್ದ ಕಾಗದದ ಚೂರು ಕೂಡಾ ಲಭಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

~ರುಂಡದ ಗುರುತು ಪತ್ತೆ ಹಚ್ಚ ಬೇಕಾಗಿದೆ. ಪ್ರದೇಶದಲ್ಲಿ ಈ ಬಗ್ಗೆ ವಿಚಾರಿಸಲಾಗಿದ್ದು ಮೃತ ವ್ಯಕ್ತಿ ಸ್ಥಳೀಯನಲ್ಲ ಎಂಬುದು ದೃಢಪಟ್ಟಿದೆ~  ಎಂದು ಜಲುಕ್ ಬಾರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು. ಮುಂಡದ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದರು.

~ಇದು ನರಬಲಿ ಆಗಿರುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಸ್ಪಷ್ಟವಾಗಿ ಈಗಲೇ ಹೇಳಲು ಸಾಧ್ಯವಿಲ್ಲ. ನಮ್ಮ ಮೊದಲ ಕೆಲಸ ಸತ್ತ ವ್ಯಕ್ತಿಯ ಗುರುತು ಪತ್ತೆ ಹಚ್ಚುವುದು~ ಎಂದು ಹೇಳಿದ ಅವರು ~ಅಪರಾಧವನ್ನು ಬೇರೆ ಯಾವುದೋ ಜಾಗದಲ್ಲಿ ಎಸಗಿ ರುಂಡವನ್ನು ನಂತರ ಇಲ್ಲಿಗೆ ತರಲಾಗಿದೆ~ ಎಂದು ವಿವರಿಸಿದರು.

ಪ್ರದೇಶದಲ್ಲಿ ಎಲ್ಲಿಯೂ ರಕ್ತದ ಕಲೆ ಕಂಡು ಬಂದಿಲ್ಲ. ಇದು ತಲೆ ಕಡಿದ ಈ ಕೃತ್ಯವನ್ನು ಬೇರೆಲ್ಲೋ ನಡೆಸಿರಬೇಕು ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

200ರಲ್ಲಿ ವ್ಯಕ್ತಿಯೊಬ್ಬ ತನ್ನ ಒಂದೂವರೆ ವರ್ಷದ ಪುತ್ರಿಯನ್ನು ಬಲಿಕೊಡಲು ಯತ್ನಿಸಿದ್ದನ್ನು ದೇವಾಲಯದ ಭದ್ರತಾ ಸಿಬ್ಬಂದಿಯೊಬ್ಬರು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ನರಬಲಿ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಪೊಲೀಸರು ನುಡಿದರು.

ಅಸ್ಸಾಮಿನ ಇತರ ಹಲವಾರು ದೇವಾಲಯಗಳಂತೆ ಕಾಮಾಕ್ಯ ದೇವಾಲಯದಲ್ಲೂ ನರಬಲಿ ನಡೆಯುತ್ತಿದ್ದ ಇತಿಹಾಸ ಇದೆ. ಅಸ್ಸಾಮಿನಲ್ಲಿ 18ನೇ ಶತಮಾನದವರೆಗೂ ನರಬಲಿ ನಡೆಯುತ್ತಿತ್ತು ಎಂದು ಅಸ್ಸಾಂ ಸಂಶೋಧನಾ ಸಂಘದ ನಿಯತಕಾಲಿಕವೊಂದು 1933ರಲ್ಲಿ ಪ್ರಕಟಿಸಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.