ADVERTISEMENT

ಅಸ್ಸಾಂ ವಿಭಜನೆಗೆ ಬೇಡಿಕೆ, ಚಳವಳಿ, ಹಿಂಸೆ, ಸಂಸದ ಶಾಸಕರ ಮನೆಗಳಿಗೆ ಕಲ್ಲು

​ಪ್ರಜಾವಾಣಿ ವಾರ್ತೆ
Published 31 ಜುಲೈ 2013, 10:03 IST
Last Updated 31 ಜುಲೈ 2013, 10:03 IST
ಅಸ್ಸಾಂ ವಿಭಜನೆಗೆ ಬೇಡಿಕೆ, ಚಳವಳಿ, ಹಿಂಸೆ, ಸಂಸದ ಶಾಸಕರ ಮನೆಗಳಿಗೆ ಕಲ್ಲು
ಅಸ್ಸಾಂ ವಿಭಜನೆಗೆ ಬೇಡಿಕೆ, ಚಳವಳಿ, ಹಿಂಸೆ, ಸಂಸದ ಶಾಸಕರ ಮನೆಗಳಿಗೆ ಕಲ್ಲು   

ಗುವಾಹಟಿ/ ಡಿಫು (ಪಿಟಿಐ): ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ಕರ್ಬಿ ಅಂಗ್ಲೊಂಗ್ ರಾಜ್ಯ ರಚನೆ ಬೇಡಿಕೆಗೆ ಬೆಂಬಲವಾಗಿ ಅಸ್ಸಾಂ ನಲ್ಲಿ ಬುಧವಾರ ಹಿಂಸಾಚಾರ ಭುಗಿಲೆದ್ದಿದ್ದು, ಕಾಂಗ್ರೆಸ್ ಸಂಸದ ಮತ್ತು ಶಾಸಕನ ಮನೆಗಳ ಮೇಲೆ ದಾಳಿ ನಡೆದಿದೆ. ಪರಿಣಾಮವಾಗಿ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸುತ್ತಿದ್ದ ವಿವಿಧ ಸಂಘಟನೆಗಳಿಗೆ ಸೇರಿದ ಚಳವಳಿಕಾರರು ದಿಫುವಿನಲ್ಲಿ ಕರ್ಬಿ ಅಂಗ್ಲೊಂಗ್ ಸ್ವಾಯತ್ತ ಮಂಡಳಿ ಕಚೇರಿಯ ಮುಖ್ಯದ್ವಾರಕ್ಕೆ ಮುತ್ತಿಗೆ ಹಾಕಿ ಬೀಗ ಜಡಿದರು ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.

ಪ್ರತಿಭಟನಕಾರರು ಸಂಸತ್ ಸದಸ್ಯ ಬೀರೇನ್ಸಿಂಗ್ ಇಂಗ್ತಿ, ಶಾಸಕ ಬಿದ್ಯಾಸಿಂಗ್ ಎಂಗ್ಲೆಂಗ್, ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕ ಸದಸ್ಯ ಜೊಯ್ ರಾಮ್ ಎಂಗ್ಲೆಂಗ್ ಮತ್ತು ಅದರ ಕಾರ್ಯಕಾರಿ ಸದಸ್ಯ ತುಲಿರಾಂ ರೊಂಘಾಂಗ್ ಅವರ ಮನೆಗಳ ಮೇಲೆ ಕಲ್ಲೆಸೆದು ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದರು.

ಕರ್ಬಿ ವಿದ್ಯಾರ್ಥಿ ಸಂಘ, ಕರ್ಬಿ ರಿಸೊ ಅಡೋರ್ಬಾ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಕಾರರಲ್ಲಿ ಕೆಲವರು ಎಂಗ್ಲೆಂಗ್ ಅವರ ಮನೆಯ ಮುಖ್ಯದ್ವಾರವನ್ನು ಮುರಿದು ಒಳಕ್ಕೆ ನುಗ್ಗಿ ಅಲ್ಲಿ ನಿಲ್ಲಿಸಲಾಗಿದ್ದ ಕಾರುಗಳನ್ನು ಜಖಂಗೊಳಿಸಿದರು ಎಂದು ಮೂಲಗಳು ಹೇಳಿವೆ.

ಇದರಿಂದ ಸಿಟ್ಟಿಗೆದ್ದ ಪೊಲೀಸರು ಮನೆಯ ಸಮೀಪ ಹಲವು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೆ ಘಟನೆಯಲ್ಲಿ ಯಾರೂ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ.

ಅಸ್ಸಾಂ ವಿಭಜನೆಯ ಬೇಡಿಕೆ 1951ರಷ್ಟು ಹಳೆಯದು ಎಂದು ನೆನಪಿಸಿದ ವಿವಿಧ ಸಂಘಟನೆಗಳ ನಾಯಕರು ಕೇಂದ್ರವು ತತ್ ಕ್ಷಣ ಕ್ರಮ ಕೈಗೊಳ್ಳದಿದ್ದರೆ ಚಳವಳಿಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.