ಹೈದರಾಬಾದ್ (ಐಎಎನ್ಎಸ್): ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿದ್ದ ಆಂಧ್ರಪ್ರದೇಶದ ಯಾತ್ರಿಗಳಿಗಾಗಿ ತೆಲುಗು ದೇಶಂ ಪಕ್ಷ (ಟಿಡಿಪಿ) ವ್ಯವಸ್ಥೆ ಮಾಡಿದ್ದ ಬಾಡಿಗೆ ವಿಮಾನದಲ್ಲಿ ಸುಮಾರು 200 ಯಾತ್ರಿಗಳು ಸೋಮವಾರ ತಡರಾತ್ರಿ ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ರಾಜಧಾನಿಗೆ ಬಂದಿಳಿದ ಯಾತ್ರಿಗಳನ್ನು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರ ಮಗ ಲೋಕೇಶ್ ಬರ ಮಾಡಿಕೊಂಡರು. ಅಲ್ಲದೆ, ನಿಲ್ದಾಣದಿಂದ ತಮ್ಮ ಸ್ವಂತ ಊರುಗಳಿಗೆ ಯಾತ್ರಿಗಳು ತೆರಳಲು ಪಕ್ಷದ ನಾಯಕರು ವಿಶೇಷ ಬಸ್ ವ್ಯವಸ್ಥೆ ಕೂಡ ಮಾಡಿದ್ದರು.
`ಉತ್ತರಾಖಂಡದಿಂದ ರಾಜ್ಯದ ಯಾತ್ರಿಗಳು ಸುರಕ್ಷಿತವಾಗಿ ವಾಪಸ್ಸಾಗಲು ರಾಜ್ಯದ ಕಾಂಗ್ರೆಸ್ ಸರ್ಕಾರ ಸರಿಯಾಗಿ ಕ್ರಮ ಕೈಗೊಂಡಿಲ್ಲ' ಎಂದು ದೆಹಲಿಯಲ್ಲಿರುವ ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ.
`ರಾಜ್ಯದಿಂದ ಯಾತ್ರೆ ಕೈಗೊಂಡಿದ್ದ 2,772 ಯಾತ್ರಿಕರಲ್ಲಿ 1,500 ಮಂದಿ ವಾಪಸ್ಸಾಗ್ದ್ದಿದಾರೆ. ಪ್ರವಾಹದಲ್ಲಿ 8 ಜನ ಮೃತಪಟಿರುವುದು ದೃಢಪಟ್ಟಿದ್ದು, 35 ಮಂದಿ ಕಾಣೆಯಾಗಿದ್ದಾರೆ. ಅಲ್ಲದೆ, 1000 ಯಾತ್ರಿಗಳು ಇನ್ನು ಉತ್ತರಾಖಂಡದಲ್ಲೇ ಸಿಲುಕಿಕೊಂಡಿದ್ದಾರೆ' ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.