ADVERTISEMENT

ಆಂಧ್ರ ರಾಜ್ಯಪಾಲರ ವಿರುದ್ಧ ಸಂಚು ಆರೋಪ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 19:30 IST
Last Updated 2 ಜೂನ್ 2011, 19:30 IST

ಹೈದರಾಬಾದ್ (ಪಿಟಿಐ):  ಆಂಧ್ರಪ್ರದೇಶದ ಮಾವೊವಾದಿ ಮುಖಂಡ ಆಜಾದ್ ಮತ್ತು ಪತ್ರಕರ್ತ ಹೇಮಚಂದ್ರ ಪಾಂಡೆ ಅವರ ನಕಲಿ ಎನ್‌ಕೌಂಟರ್ ಹತ್ಯೆಯ ಸಂಚಿನಲ್ಲಿ ಆಂಧ್ರ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್, ಗೃಹ ಸಚಿವೆ ಸವಿತಾ ಇಂದ್ರಾ ರೆಡ್ಡಿ ಮತ್ತು ಮಾಜಿ ಪೊಲೀಸ್ ಮಹಾನಿರ್ದೇಶಕರು ಭಾಗಿಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮಾವೊ ಸಿದ್ಧಾಂತವಾದಿ ವರವರ ರಾವ್ ಅವರು ಆಗ್ರಹಿಸಿದ್ದಾರೆ.

ಎನ್‌ಕೌಂಟರ್ ನಕಲಿಯಲ್ಲ ಎಂದು ಸಮರ್ಥನೆ ನೀಡುವ ಮೂಲಕ ರಾಜ್ಯಪಾಲ ನರಸಿಂಹನ್, ಸಚಿವೆ ರೆಡ್ಡಿ, ಮಾಜಿ ಡಿಜಿಪಿ ಮತ್ತು ಅದಿಲಾಬಾದ್ ಜಿಲ್ಲೆಯ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಅವರು ಎನ್‌ಕೌಂಟರ್ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿರುವುದಲ್ಲದೆ, ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ.
 
ಹಾಗಾಗಿ ನಕಲಿ ಎನ್‌ಕೌಂಟರ್‌ನಲ್ಲಿ ಅವರೂ ಸಂಚುದಾರಾಗಿದ್ದಾರೆ ಎಂದು ರಾವ್ ಅವರು ಸಿಬಿಐನ ಹೈದರಾಬಾದ್ ವಲಯದ ಜಂಟಿ ನಿರ್ದೇಶಕ ಮತ್ತು ಮುಖ್ಯಸ್ಥ ವಿ.ವಿ. ಲಕ್ಷ್ಮೀನಾರಾಯಣ ಅವರಿಗೆ ದೂರು ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧವಿಲ್ಲದಿದ್ದರೂ ರಾಜ್ಯಪಾಲರು, ರೆಡ್ಡಿಯವರೊಂದಿಗೆ ಹೇಳಿಕೆಗಳನ್ನು ನೀಡುವ ಮೂಲಕ ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ.

ಸಾಕ್ಷಿಗಳ ಮಧ್ಯೆ ಪ್ರವೇಶಿಸುವ ಜತೆಗೆ ತನಿಖಾಧಿಕಾರಿಗಳ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ರಾವ್, ಅವರ ಹೆಸರುಗಳನ್ನು ಅಪರಾಧ ಸಂಚಿನ ಪಟ್ಟಿಯಲ್ಲಿ ದಾಖಲಿಸುವಂತೆ ಸಿಬಿಐಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.