ADVERTISEMENT

ಆದರ್ಶ ವಸತಿ ಕಟ್ಟಡ ಹಿಂತಿರುಗಿಸಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಮುಂಬೈ (ಪಿಟಿಐ): ಕಳಂಕಿತ ಆದರ್ಶ ಸಂಸ್ಥೆಯ ಸದಸ್ಯರು ತಮ್ಮ ತಪ್ಪನ್ನು ಅರಿತುಕೊಂಡು, ವಿವಾದಾತ್ಮಕ ವಸತಿ ಸಮುಚ್ಛಯವನ್ನು ರಕ್ಷಣಾ ಸಚಿವಾಲಯಕ್ಕೆ ಒಪ್ಪಿಸುವಂತೆ ಗುರುವಾರ ಸಲಹೆ ನೀಡಿರುವ ಬಾಂಬೆ ಹೈಕೋರ್ಟ್, `ದೇಶದ ಭದ್ರತೆಗೆ ಪ್ರಥಮ ಪ್ರಾಮುಖ್ಯತೆ~ ನೀಡಲು ಸೂಚಿಸಿದೆ.

`ಸಂಸ್ಥೆ ತಪ್ಪನ್ನು ಒಪ್ಪಿಕೊಂಡು, ವಿವಾದಿತ ಕಟ್ಟಡವನ್ನು ಸಂಬಂಧಿಸಿದವರಿಗೆ ವಾಪಸು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನೀವು ತಪ್ಪು ಮಾಡಿರಬಹುದು. ಆದರೆ ಹೃದಯವನ್ನು ಬದಲಿಸಿಕೊಳ್ಳಲು ಅವಕಾಶವಿದೆ. ನೀವು ಕೊಲೆಗಾರರಲ್ಲ ಅಥವಾ ಉಗ್ರಗಾಮಿಗಳಲ್ಲ ಅಥವಾ ಕಟ್ಟಾ ಅಪರಾಧಿಗಳಲ್ಲ. ಆದ್ದರಿಂದ ಕಟ್ಟಡವನ್ನು ರಕ್ಷಣಾ ಸಚಿವಾಲಯಕ್ಕೆ ಹಿಂತಿರುಗಿಸಿ~ ಎಂದು ನ್ಯಾಯಮೂರ್ತಿಗಳಾದ ಪಿ.ಬಿ. ಮಜುಂದಾರ್ ಮತ್ತು ಆರ್.ಡಿ. ಧನುಕಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಕಿವಿಮಾತು ಹೇಳಿತು.

`ನಾವು ಉಗ್ರರ ದಾಳಿಯಿಂದ ಪಾಠ ಕಲಿಯಬೇಕಿದೆ. ಉಗ್ರರು ತಾಜ್ ಹೋಟೆಲ್ ತನಕ ಈಗಾಗಲೇ ಬಂದಿದ್ದಾರೆ. ನಾಳೆ ಅವರು ಸೂಕ್ಷ್ಮ ರಕ್ಷಣಾ ತಾಣಗಳ ಮೇಲೆ ದಾಳಿ ನಡೆಸಬಹುದು. ದೇಶದ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು~

`ಆದರ್ಶ ಸಂಸ್ಥೆಗೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಮತ್ತು ಯೋಜನಾ ಪ್ರಾಧಿಕಾರ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ ನ್ಯಾಯಪೀಠ, `ರಕ್ಷಣಾ ಸಚಿವಾಲಯದಿಂದ ಏಕೆ ನಿರಾಕ್ಷೇಪಣಾಪತ್ರ ಕೇಳಲಿಲ್ಲ? ಈ ಭೂಮಿ ರಕ್ಷಣಾ ನೆಲೆಗಳಿಗೆ ಬಹಳ ಸಮೀಪದಲ್ಲಿದ್ದು, ಆಡಳಿತವು ಅನುಮತಿ ಮಂಜೂರು ಮಾಡುವ ಮುನ್ನ ಭದ್ರತಾ ಅಂಶ ಪರಿಶೀಲಿಸಬೇಕಿತ್ತು~ ಎಂದು ನ್ಯಾಯಪೀಠ ಹೇಳಿದೆ.

ಅಧಿಕಾರಿಗಳ ಅಮಾನತು
ಮುಂಬೈ (ಪಿಟಿಐ):
ತಮ್ಮ ಹತ್ತಿರದ ಬಂಧುಗಳು ಮತ್ತು ಇತರ ಅನರ್ಹರಿಗೆ ಸದಸ್ಯತ್ವ ಮಂಜೂರು ಸೇರಿದಂತೆ ಆದರ್ಶ ವಸತಿ ಹಗರಣದಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರ ಸರ್ಕಾರದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ಗುರುವಾರ ಅಮಾನತು ಮಾಡಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT