ADVERTISEMENT

ಆದರ್ಶ ವಸತಿ ಸೊಸೈಟಿ ಹಗರಣ ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 19:30 IST
Last Updated 18 ಜನವರಿ 2011, 19:30 IST

ಮುಂಬೈ (ಪಿಟಿಐ): ಆದರ್ಶ ವಸತಿ ಸೊಸೈಟಿ ಹಗರಣದ ಪ್ರಾಥಮಿಕ ತನಿಖೆಯನ್ನು ಮಂದಗತಿಯಲ್ಲಿ ನಡೆಸುತ್ತಿರುವ ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡಿರುವ ಬಾಂಬೆ ಹೈ ಕೋರ್ಟ್, ಶೀಘ್ರ ತನಿಖೆ ಪೂರ್ಣಗೊಳಿಸಿ ಎರಡು ವಾರದೊಳಗೆ ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ದಾಖಲಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವಂತೆ ತಾಕೀತು ಮಾಡಿದೆ.

ಎರಡು ವಾರಗಳ ತರುವಾಯ ನಡೆಯುವ ವಿಚಾರಣೆಗೆ ಹಾಜರಾಗುವಂತೆ ಸಿಬಿಐನ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಹೈ ಕೋರ್ಟ್ ಸಮನ್ಸ್ ಕೂಡ ಮಂಗಳವಾರ ಜಾರಿ ಮಾಡಿದೆ. ‘ಈ ಹಗರಣದ ಬಗ್ಗೆ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿ ಎರಡು ತಿಂಗಳ ಮೇಲಾಗಿದೆ. ಆದರೂ ಯಾಕೆ ಎಫ್‌ಐಆರ್ ದಾಖಲಿಸಿಲ್ಲ?’ ಎಂದು ಹೈ ಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಬಿ.ಎಚ್. ಮರ್ಲಪಲ್ಲೆ ಮತ್ತು ಯು.ಡಿ. ಸಾಳ್ವಿ ಪ್ರಶ್ನಿಸಿದ್ದಾರೆ.

ಎಸಿಬಿ ತನಿಖೆ ಬಗ್ಗೆ ಶಂಕೆ: ಹಗರಣ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಪರಿಸರ ಹೋರಾಟಗಾರ ಸಿಮ್‌ಪ್ರೀತ್ ಸಿಂಗ್, ಈ ಹಗರಣದ ವಿಚಾರಣೆಯನ್ನು ಸಿಬಿಐ ಮತ್ತು ರಾಜ್ಯದ ಭ್ರಷ್ಟಾಚಾರ ತಡೆ ಸಂಸ್ಥೆ (ಎಸಿಬಿ) ನಡೆಸುತ್ತಿವೆ. ಇವುಗಳ ನಡುವೆ ಇತಿಮಿತಿಯ ವಿವಾದವಿದ್ದು, ಅದು ತನಿಖೆಯನ್ನೇ ದಾರಿತಪ್ಪಿಸಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.