ಮುಂಬೈ (ಪಿಟಿಐ): ಆದರ್ಶ ಗೃಹ ನಿರ್ಮಾಣ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ನಗರದ ಮಾಜಿ ಮುಖ್ಯ ಪೌರ ಜೈರಾಜ್ ಪಾಠಕ್ ಮತ್ತು ರಾಜ್ಯ ಮಾಜಿ ಮುಖ್ಯ ಮಾಹಿತಿ ಆಯುಕ್ತ ರಮಾನಂದ ತಿವಾರಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯವು ಗುರುವಾರ ಜಾಮೀನು ನೀಡಿತು.
ತನಿಖಾ ತಂಡವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯನ್ನು 60 ದಿನಗಳೊಳಗೆ ನ್ಯಾಯಾಲಯಕ್ಕೆ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ತಿವಾರಿ ಮತ್ತು ಪಾಠಕ್ ಅವರಿಗೆ ಜಾಮೀನು ನೀಡಿದೆ.
`ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯನ್ನು ತನಿಖಾ ತಂಡದ ಅಧಿಕಾರಿಗಳು 60 ದಿನಗಳೊಳಗೆ ಅಂದರೆ ಜೂನ್ 4ರೊಳಗೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಸಲ್ಲಿಸಬೇಕಿತ್ತು. ಇದರಲ್ಲಿ ತನಿಖಾ ತಂಡವು ವಿಫಲವಾಗಿದೆ. ಇದರ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಾಮೀನು ನೀಡಿದೆ~ ಎಂದು ಪಠಾಕ್ ಪರ ವಕೀಲ ಸ್ವಪ್ನಾ ಕೊಡೆ ಹಾಗೂ ತಿವಾರಿ ಪರ ವಕೀಲ ಸದಾನಂದ ಶೆಟ್ಟಿ ಅವರು ತಿಳಿಸಿದ್ದಾರೆ.
`ಸಿಬಿಐ ಅಧಿಕಾರಿಗಳು ನಮ್ಮನ್ನು ಬಂಧಿಸಿದ ಬಳಿಕ 60 ದಿನಗಳು ಕಳೆದರೂ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ~ ಎಂದು ನಗರದ ಮಾಜಿ ಮುಖ್ಯ ಪೌರ ಜೈರಾಜ್ ಪಾಠಕ್ ಮತ್ತು ರಾಜ್ಯ ಮಾಜಿ ಮುಖ್ಯ ಮಾಹಿತಿ ಆಯುಕ್ತ ರಮಾನಂದ ತಿವಾರಿ ಅವರು ಸೋಮವಾರ ಇಲ್ಲಿನ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.