ADVERTISEMENT

ಆರ್ಥಿಕ ಹಿಡಿತಕ್ಕೆ ಜಾಗ್ರತೆ ಅಗತ್ಯ: ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ದೇಶದಲ್ಲಿ ಉಂಟಾಗಿರುವ ಆರ್ಥಿಕ ಹಿನ್ನಡೆ ಕುರಿತು ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಇಂತಹ ನಕಾರಾತ್ಮಕ ಸನ್ನಿವೇಶದ ಬಗ್ಗೆ ಜಾಗರೂಕರಾಗಿದ್ದರೆ ರಾಷ್ಟ್ರದ ಆರ್ಥಿಕ ಸ್ಥಿತಿ ಮೇಲೆ ಹಿಡಿತ ಸಾಧಿಸಿಲು ಸಾಧ್ಯ ಎಂದು ಹೇಳಿದ್ದಾರೆ.

ಹನ್ನೆರಡನೇ ಪಂಚವಾರ್ಷಿಕ ಯೋಜನೆ ಕುರಿತು ಶನಿವಾರ ನಡೆದ `ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಸಭೆ ಉದ್ದೇಶಿಸಿ ಮಾತನಾಡಿದ ಅವರು, `ಮುಂದಿನ ಪಂಚವಾರ್ಷಿಕ ಯೋಜನೆಯಲ್ಲಿ ದೇಶದ ಆಂತರಿಕ ವೃದ್ಧಿ ದರದ ಗುರಿ ಶೇಕಡಾ 9ರಷ್ಟಿರಬೇಕು. ಆದರೆ, ಆರ್ಥಿಕ ಕುಸಿತದ ಸನ್ನಿವೇಶದಲ್ಲಿ ಇದು ಕಾರ್ಯಸಾಧ್ಯವೇ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಿದೆ~ ಎಂದರು.

`ಜಾಗತಿಕ ಆರ್ಥಿಕ ಹಿನ್ನಡೆಯ ಕಾರಣ ನಮ್ಮ ದೇಶದಲ್ಲೂ ಆರ್ಥಿಕ ಹಿಂಜರಿತ ಉಂಟಾಗಿದೆ. ಆದರೆ ಇದು ತಾತಾಲ್ಕಿಕ. ಪ್ರಸಕ್ತ ವರ್ಷದಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಆಂತರಿಕ ವೃದ್ಧಿ ದರ ಇಳಿಮುಖವಾಗಿಯೇ ಇದೆ~ ಎಂದರು.
`12ನೇ ಪಂಚವಾರ್ಷಿಕ ಯೋಜನೆಗೆ ಗುರಿಗಳನ್ನು ನಿಗದಿ ಪಡಿಸುವಾಗ ನಾವು ದೀರ್ಘಾವಧಿ ಸಾಧ್ಯತೆ ಕುರಿತು ಕಡ್ಡಾಯವಾಗಿ ಚಿಂತಿಸಬೇಕು. ನಮ್ಮ ದೇಶದ ಭವಿಷ್ಯ ಚೆನ್ನಾಗಿರುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ. ಮುಂದಿನ ಪಂಚವಾರ್ಷಿಕ ಯೋಜನೆಯಲ್ಲಿ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಹಾಗೂ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಮೂಲ ಸೌಕರ‌್ಯಗಳನ್ನು ಅಭಿವೃದ್ಧಿ ಪಡಿಸಲು ಒತ್ತು ನೀಡಬೇಕು~ ಎಂದು ಪ್ರಧಾನಿ ಸಿಂಗ್ ಹೇಳಿದರು.

2010-11ನೇ ಸಾಲಿನಲ್ಲಿ ದೇಶದ ಆಂತರಿಕ ವೃದ್ಧಿ ದರ ಶೇ 8.5ರಷ್ಟಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದು ಶೇ 8ಕ್ಕೆ ನಿಲ್ಲಬಹುದು ಎಂಬ ನಿರೀಕ್ಷೆ ಇದೆ.

ಎನ್‌ಡಿಸಿ ಸಭೆಯಲ್ಲಿ ಕೇಂದ್ರದ ಹಿರಿಯ ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.