ನವದೆಹಲಿ: ಪ್ರಬಲ ಲೋಕಪಾಲ ಮಸೂದೆಗಾಗಿ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಬುಧವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಉಪವಾಸದಿಂದ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಅಣ್ಣಾ ತಂಡದ ಸದಸ್ಯರು ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದಾರೆ.
ಅಣ್ಣಾ ತಂಡದ ಸದಸ್ಯರಾದ ಅರವಿಂದ ಕೇಜ್ರಿವಾಲ್, ಮನಿಷ್ ಸಿಸೋಡಿಯಾ ಹಾಗೂ ಗೋಪಾಲ ರೈ ಅವರ ಸತ್ಯಾಗ್ರಹ ಏಳನೇಯ ದಿನದಲ್ಲಿ ಮುಂದುವರಿದಿದ್ದು, ಅವರಲ್ಲಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಕೇಜ್ರಿವಾಲ್ ಅವರು ದೇಹ ಸ್ಥಿತಿ ಹದಗೆಟ್ಟಿದೆ. ಸಂಪೂರ್ಣವಾಗಿ ನಿತ್ರಾಣಗೊಂಡಿರುವ ಅರವಿಂದ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದಾರೆ.
`ನಾನು ನಿತ್ರಾಣಗೊಂಡಿದ್ದೇನೆ. ಆದರೆ ಸರ್ಕಾರ ನನ್ನನ್ನು ಆಸ್ಪತ್ರೆಗೆ ದಾಖಲಿಸಲು ಹೇಳುತ್ತಿರುವ ಕಾರಣದಂತೆ ನಾನು ಆತ್ಮಹತ್ಯೆಗೆ ಪ್ರಯತ್ನಿಸುತ್ತಿಲ್ಲ. ಒಂದು ವೇಳೆ ಸರ್ಕಾರ ನನ್ನನ್ನು ಆಸ್ಪತ್ರೆಗೆ ದಾಖಲಿಸಿದರೆ ನೀವು ನನ್ನನ್ನು ಅಲ್ಲಿಂದ ಹೊರಗೆ ತರಬೇಕು, ಎಂದು ಕೇಜ್ರಿವಾಲ್ ಅವರು ಬೆಂಬಲಿಗರಿಗೆ ಕರೆ ನೀಡಿದರು.
ಇದೇ ವೇಳೆ ತಮ್ಮ ಉಪವಾಸವನ್ನು `ಜನತೆಗಾಗಿ ಮಾಡುತ್ತಿರುವ ತ್ಯಾಗ~ ಎಂದು ಹೇಳಿದ ಅರವಿಂದ ಅವರು ~ಒಂದು ವೇಳೆ ಸರ್ಕಾರ ನನ್ನನ್ನು ಬಲಾತ್ಕಾರವಾಗಿ ಆಸ್ಪತ್ರೆಗೆ ದಾಖಲಿಸಿದರೆ ನಾನು ಖಂಡಿತ ಸಾಯುತ್ತೇನೆ~ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.